Pages

Wednesday, April 15, 2009

ಕಣ್ಣಾ ಮುಚ್ಚೆ ಕಾಡೆ ಗೂಡೆ...

ಕಣ್ಣಾ ಮುಚ್ಚೆ ಕಾಡೆ ಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ

ಈ ಹಾಡು ನಮ್ಮಲ್ಲಿ ಅನೇಕರು ಚಿಕ್ಕಂದಿನಲ್ಲಿ ಹಾಡಿದ್ದೀವಿ, ಹಾಡ್ತಾ ಆಟವಾಡಿದ್ದೀವಿ. ಆದ್ರೆ ಇದರ ಹಿಂದೆ ಇರೋ ಅರ್ಥ ನನಗೆ ತಿಳಿದದ್ದು ಇತ್ತೀಚೆಗಷ್ಟೆ.
  • ಇದರ ಸಾರಾಂಶ ಹೀಗಿದೆ:
    ಉದ್ದಿನ ಮೂಟೆಯನ್ನು ಇಲ್ಲಿ ವಯಸ್ಸಾದ ಜನರಿಗೆ ಹೋಲಿಸುತ್ತಾರೆ. ವಯಸ್ಸಾದ ಜನರನ್ನು ಅವರ ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಅವರು ಕಾಲಾಂತರವಾದ ನಂತರ ಪರಿತಪಿಸುವುದನ್ನು ಹೇಳುತ್ತಿದ್ದಾರೆ. ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ ಅಂದರೆ, ನಮ್ಮ ಅಪ್ಪ ಅಮ್ಮಂದಿರನ್ನು ಅವರ ಮುಪ್ಪಿನ ಸಮಯದಲ್ಲಿ ಸರಿಯಾಗಿ ನೋಡಿಕೊಂಡಿಲ್ಲ ಎಂದು. ಹಾಗೆಯೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಎಂದರೆ, ನಾನಂತು ಸರಿಯಾಗಿ ನೋಡಿಕೊಳ್ಳಲಿಲ್ಲ ನೀವಾದರು ಅವರನ್ನು ಹಿಡಿದುಕೊಳ್ಳಿ ಅಂದರೆ ಸರಿಯಾಗಿ ಜೋಪಾನ ಮಾಡಿ ಎಂದು.
  • ಅಲ್ಲದೆ ಇದು ರಾಮಾಯಣದ ಕಥೆಯನ್ನೇ ಹೇಳುತ್ತದೆ ಎನ್ನತ್ತಾರೆ:
    ಕಣ್ಣಾ ಮುಚ್ಚೆ : ದಶರಥನು ಕಣ್ಣು ಮುಚ್ಚಲಾಗಿ
    ಕಾಡೆ ಗೂಡೆ : ರಾಮಿನಿಗೆ ಕಾಡೆ ಗೊಡಾಯಿತು (ವಾಸ ಸ್ಥಳವಾಯ್ತು)
    ಉದ್ದಿನ ಮೂಟೆ ಉರಳೇ ಹೋಯ್ತು : ಮೂಟೆಯಂತಹ(ದೈತ್ಯಾಕಾರದ) ರಾವಣ ಉರಳೇ ಹೋದ.
  • ಇದನ್ನ ನಮ್ಮ ಯುವಕರು ಮಾರ್ಪಡಿಸಿ ಹಾಡೋದು ಹೀಗೆ :
    ಕಣ್ಣಾ ಮುಚ್ಚೆ ಲವರ್ಸ್ ಡೇ
    ಕಾಡೇಗೂಡೇ ಡೇಟಿ೦ಗ್ ಡೇ
    ಉದ್ದಿನ ಮೂಟೇ ಪ್ರೆಗ್ನೆ೦ಟ್ಸ್ ಡೇ
    ಉರುಳೇ ಹೋಯ್ತು ಡೆಲಿವರಿ ಡೇ !!

Tuesday, February 24, 2009

ರುದ್ರಾಕ್ಷಿ ಪ್ರದರ್ಶನ!!!

"ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಬಸವಭವನದಲ್ಲಿ ’ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ’ ವನ್ನು ಏರ್ಪಡಿಸಲಾಗಿದೆ. ನಿಮ್ಮ ಜನ್ಮ ದಿನಾಂಕದ ಪ್ರಕಾರ ನೀವು ಯಾವ ರುದ್ರಾಕ್ಷಿಯನ್ನು ಧರಿಸಬೇಕೆಂದು ತಿಳಿಸುತ್ತಾರೆ, ಅಲ್ಲದೆ ಅತ್ಯಪರೂಪವಾದ ನೀಪಾಳದ "ಏಕಮುಖಿ" ರುದ್ರಾಕ್ಷಿಯ ದರ್ಶನ ಪಡೆದು ನಿಮ್ಮೆಲ್ಲಾ ಪಾಪಗಳಿದ ಮುಕ್ತಿ ಹೊಂದಬಹುದು" ಎಂಬ ಜಾಹೀರಾತನ್ನು ಪೇಪರಿನಲ್ಲಿ ಓದಿ ಕುತೂಹಲ ಉಂಟಾಯಿತು. ರುದ್ರಾಕ್ಷಿಯ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿರಲಿಲ್ಲ. ಅವುಗಳಲ್ಲಿ ಹೀಗೆಲ್ಲಾ ಮುಖಗಳು ಇರುತ್ವಾ ಅಂತ ಹೇಮಂತರನ್ನು ಕೇಳಿದಾಗ ಅವರು ಪುಟ್ಟ ಲೆಕ್ಚರೇ ಕೊಟ್ಟರು. ರುದ್ರಾಕ್ಷಿ ಮರದ ಬಟಾನಿಕಲ್ ಹೆಸರು:Elaeocarpus sphaericus. ಸುಮಾರು ೩೫-೪೦ ಅಡಿ ಎತ್ತರದ ಮರ. ನೋಡಲು ಮಾವಿನ ಮರದ ಹಾಗೆ ಇರುತ್ತದೆ. ಏಪ್ರೆಲ್ -ಮೇ ನಲ್ಲಿ ಹಳದಿ ಬಣ್ಣದ ಹೂವುಗಳು ಗೊಂಚಲು ಗೊಂಚಲಾಗಿ ಅರಳುತ್ತವೆ. ನೀಲಿ ಬಣ್ಣದ ನಯವಾದ ಹಣ್ಣುಗಳು ಒಣಗಿದ ನಂತರ ಸುಕ್ಕುಸುಕ್ಕಾಗುವುದು. ಇದರ ಬೀಜವೇ ರುದ್ರಾಕ್ಷಿ. ಬೀಜದಲ್ಲಿ ಹಲವು ಗೆರೆಗಳಿರುತ್ತವೆ, ಅದರಲ್ಲಿ ಎಷ್ಟು ಗೆರೆಗಳಿವೆಯೋ ಅಷ್ಟು ಮುಖದ ರುದ್ರಾಕ್ಷಿಯದು. ರುದ್ರಾಕ್ಷಿ ಮಣಿಗೆ ಕೆಲವು ಔಷಧೀಯ ಗುಣಗಳಿವೆ ಎಂದರು. ಪ್ರದರ್ಶನದ ಬಗ್ಗೆ ಅವರಿಗೂ ಕುತೂಹಲ ಉಂಟಾಗಿ ಹೋಗಿ ನೋಡಿ ಬರೋಣವೆಂದು ಹೊರಟೇಬಿಟ್ಟ್ವಿ.

ಪ್ರದರ್ಶನದಲ್ಲಿ ಬಟಾಣಿ ಗಾತ್ರದಿಂದ ಹಿಡಿದು ನಿಂಬೆಹಣ್ಣಿನಷ್ಟು ದಪ್ಪದ ರುದ್ರಾಕ್ಷಿಗಳಿದ್ದವು. ೪೦೦ ರೂಪಾಯಿಂದ ಶುರುವಾಗಿ ೧೦ ಲಕ್ಷದವರೆಗಿನ ಮಣಿಗಳಿದ್ದವು. ಬಂದಿದ್ದ ಸಾರ್ವಜನಿಕರಿಗೆ ಯಾರ್ ಯಾರು ಯಾವ ರುದ್ರಾಕ್ಷಿ ಧರಿಸಬೇಕೆಂಬುದನ್ನು ೩-೪ ಮಂದಿ ಪರಿಣಿತರು ಹೇಳುತ್ತಿದ್ದರು. ನಾವು ರುದ್ರಾಕ್ಷಿ ಕೊಳ್ಳಲು ಬಂದಿಲ್ಲ ಕೇವಲ ವಿಚಾರತಿಳಿದುಕೊಳ್ಳಲು ಬಂದಿರುವುದು ಎಂದರಿತ ಕೌಂಟರ್-ನ ಹುಡುಗರು ನಮ್ಮ ಕಡೆ ಹೆಚ್ಚು ಗಮನ ಕೊಡಲಿಲ್ಲ. ಅಲ್ಲಿ ದರ್ಶನಕ್ಕೆ ಇದ್ದ ಏಕಮುಖಿ ರುದ್ರಾಕ್ಷಿ ಬಹಳ ಅಪರೂಪವಾದದ್ದಂತೆ, ಅದರ ಬೆಲೆ ಹಲವು ಕೋಟಿ ಆಗುವುದು ಎಂದರು. ಸರಿ ಇನ್ನೇನು ಹೊರಡೋಣ ಅನ್ನುವಷ್ಟರಲ್ಲಿ, ನಾವು ಫೋಟೋ ತೆಗೆಯುತ್ತಿದ್ದನ್ನು ಗಮನಿಸಿದ ವ್ಯಕ್ತಿಯೊಬ್ಬರು ಬಂದು ಮಾತಾಡಿಸಿದರು. ಅವರು ರುದ್ರಶಕ್ತಿ ಸಂಸ್ಥೆಯ ಅಧ್ಯಕ್ಷರಾದ ತನ್ಮಯ್. ಅವರು ನಮ್ಮ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ರುದ್ರಾಕ್ಷಿ ಮಣಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಆ ನೀರನ್ನು ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯ ರೋಗ, ಸ್ನಾಯು ರೋಗ, ಅಪಸ್ಮಾರ, ಮೂತ್ರಪಿಂಡ, ಸಕ್ಕ್ರರೆಖಾಯಿಲೆ, ಮೂರ್ಚೆ ರೋಗ, ಚ್ರಮರೋಗ, ರಕ್ತದೊತ್ತಡ, ಸಂತಾನ ದೋಷ, ನರದೌರ್ಬಲ್ಯ, ಮಾನಸಿಕ ರೋಗ, ದೃಷ್ಟಿ ದೋಷ ಮುಂತಾದ ಖಾಯಿಲೆಗಳಿಗೆ ಔಷದಿಯಾಗಿ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಬಳಸುತ್ತಾರೆ ಎಂದು ತಿಳಿಸಿದರು.

ಪೇಟೆಯಲ್ಲಿ ಹಲವರು ನಕಲಿ ರುದ್ರಾಕ್ಷಿಯನ್ನು ಕಮ್ಮಿ ಬೆಲೆಗೆ ಮಾರುತ್ತಿದ್ದಾರೆ. ನಿಜವಾದ ರುದ್ರಾಕ್ಷಿಯನ್ನು ಗುರುತಿಸೋದು ಹೇಗೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅದ್ಭುತವಾದ ಈ ರುದ್ರಾಕ್ಷಿಯ ಶಕ್ತಿಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ತಮ್ಮ ಈ ಪ್ರದರ್ಶನದ ಗುರಿ ಎಂದರು ತನ್ಮಯ್. ಅಸಲಿ ರುದ್ರಾಕ್ಷಿಯನ್ನು ಗುರುತಿಸುವ ಬಗ್ಗೆ ದೊಡ್ಡ ದೊಡ್ಡ ಬ್ಯಾನರ್ ಹಾಕಿದ್ದರು. ನಿಜವಾದ ರುದ್ರಾಕ್ಷಿ ಮಣಿಯು ನೀರಿನಲ್ಲಿ ಮುಳುಗುತ್ತದಂತೆ. ಬೆಲೆಬಾಳುವ ರುದ್ರಾಕ್ಷಿಯನ್ನು ಕೊಳ್ಳುವ ಮುನ್ನ ಅದರ X-ray ತೆಗೆಸಿ ಒಳಗಿರುವ ಕಂಪಾರ್ಟ್ಮೆಂಟ್-ಗಳು ಹೊರಗಿನ ಗೆರೆಗಳಿಗೆ ಸಮವಾಗಿದ್ದರೆ ಅದು ಅಸಲಿ ರುದ್ರಾಕ್ಷಿ.

ಇನ್ನೂ ಹಲವು ಮಾಹಿತಿ ಇಲ್ಲಿದೆ ಓದಿ.

ರುದ್ರ+ಅಕ್ಷಿ -ರುದ್ರ ಅಂದರೆ ಶಿವನ ರೌದ್ರ ಅವತಾರ,ಅಕ್ಷಿ ಅಂದರೆ ಕಣ್ಣು. ಇದು ಹಿಮಾಲಯ ಪರ್ವತದ ಸಮೀಪ ಹೆಚ್ಚಾಗಿ ನೇಪಾಳದಲ್ಲಿ ಬೆಳೆಯುವುದು, ದಕ್ಷಿಣದಲ್ಲಿ ರಾಮೇಶ್ವರದಲ್ಲಿ ಕೆಲವು ಮರಗಳಿವೆಯಂತೆ.ರುದ್ರಾಕ್ಷಿಯಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖದವರೆಗೆ ಭೇದಗಳಿವೆ. ೧,೧೪,೨೧ ಮುಖದ ರುದ್ರಾಕ್ಷಿ ಅಪರೂಪ. ಅದರಲ್ಲೂ ಒಂದು ಮುಖದ ರುದ್ರಾಕ್ಷಿ ಅಪರೂಪದಲ್ಲಿ ಅಪರೂಪ.

ಶಿವನಿಗೂ ರುದ್ರಾಕ್ಷಿಗೂ ಏನು ಸಂಬಂಧ ಎಂಬುದಕ್ಕೆ ಪುರಾಣಗಳಲ್ಲಿ ಒಂದೆರಡು ಕತೆಗಳಿವೆ-
ದೇವಿ ಭಗವತ್ ಪುರಾಣದ ಪ್ರಕಾರ ’ಮಾಯ’ ಎಂಬ ಅತಿ ಶಕ್ತಿಶಾಲಿಯೂ, ಕ್ರೂರಿಯೂ ಆದ ಒಬ್ಬ ರಾಕ್ಷಸನಿದ್ದನು. ಸಾಧು-ಸಂತರಿಗೂ ದೇವತೆಗಳಿಗೂ ತೊಂದರೆಯುಂಟು ಮಾಡುತ್ತಿದ್ದನು. ಅವನನ್ನು ಯುದ್ಧದಲ್ಲಿ ಸೋಲಿಸಲು ಯಾರಿಂದಲೂ ಸಾದ್ಯವಾಗಲಿಲ್ಲ. ಆತನು ಚಿನ್ನ, ಬೆಳ್ಳಿ ಮತ್ತು ಕಬ್ಬಿಣದಿಂದ ಮೂರು ಊರುಗಳನ್ನು ನಿರ್ಮಿಸಿದನು. ಅವಗಳನ್ನು ಬೇಧಿಸಲು ಅಸಾಧ್ಯವಾಗಿತ್ತು, ಅದನ್ನು ’ತ್ರಿಪುರಾ’ ಅಂತಲೂ ಅದರ ಒಡೆಯನಾದ್ದರಿಂದ ಆ ರಾಕ್ಷಸನಿಗೆ "ತ್ರಿಪುರಾಸುರ" ಅಂತಲೂ ಹೆಸರು ಬಂತು. ತನ್ನ ಇಬ್ಬರು ತಮ್ಮಂದಿರೊಡಗೂಡಿ ಸ್ವರ್ಗಾಧಿಪತಿ ಇಂದ್ರನನ್ನೂ ಇತರೆ ದೇವತೆಗಳನ್ನೂ ಸೋಲಿಸಿ ಅವರನ್ನು ಲೂಟಿ ಮಾಡಿದ. ಕಂಗೆಟ್ಟ ದೇವತೆಗಳು ಬ್ರಹ್ಮ,ವಿಷ್ಣು ಜೊತೆಗೂಡಿ ಶಿವನ ಬಳಿ ಬಂದು ತ್ರಿಪುರಾಸುರನನ್ನೂ ನಾಶಮಾಡಿ ತಮ್ಮನ್ನು ಕಾಪಾಡಬೇಕೆಂದು ಬೇಡಿಕೊಂಡರು. ಶಿವ-ತ್ರಿಪುರಾಸುರನ ಯುದ್ಧಕ್ಕೆ ವಿಶೇಷ ಸಿದ್ಧತೆಗಳು ನಡೆದವು. ಭೂಮಿಯೇ ರಥವಾಯಿತು, ಸೂರ್ಯ-ಚಂದಿರರು ಕಾಲ್ಚಕ್ರಗಳಾದರು. ವಿಷ್ಣು ಬಾಣವಾಗಿ, ಬ್ರಹ್ಮ ಸಾರಥಿಯಾಗಿ ಶಿವನ ಜೊತೆಗೂಡಿದರು. ಈ ವಿಶೇಷ ರಥವನ್ನೇರಿ ಹೊರಟ ಶಿವನು ಒಂದೇ ಬಾಣದಿಂದ ತ್ರಿಪುರವನ್ನೂ ಅದರಲ್ಲಿದ್ದ ತ್ರಿಪುರಾಸುರನನ್ನೂ ಕೊನೆಗೊಳಿಸಿದನು. ದೇವತೆಗಳು ಹರ್ಷೋದ್ಗಾರದಿಂದ ಶಿವನ ಹೊಗಳುತ್ತಾ, ಅವನಿಗೆ ಧನ್ಯವಾದಗಳನ್ನು ಅರ್ಪಿಸಿದರು. ತದನಂತರ ಶಿವನು ಹಿಮಾಲಯಕ್ಕೆ ಬಂದು ಕಣ್ಣ್ಮುಚ್ಚಿ ಧ್ಯಾನಮಾಡುತ್ತಾ ಕುಳಿತ. ಧ್ಯಾನಮುಗಿಸಿ ಕಣ್ಣು ತೆರೆದಾಗ ಶಿವನ ಕಣ್ಣಿನಿಂದ ಜಾರಿದ ನೀರಿನ ಹನಿಗಳು ಭೂಮಿಯಮೇಲೆ ಬಿದ್ದವು. ಅವೇ ಮುಂದೆ ರುದ್ರಾಕ್ಷಿ ಮರಗಳಾದವು.

ಶಿವ ಪುರಾಣದ ಪ್ರಕಾರ ಶಿವ ೧೦೦೦ ವರ್ಷ ತಪಗೈದ ಬಳಿಕ ಕಣ್ಣು ತೆರೆದಾಗ ಕಣ್ಣೀರ ಹನಿ ನೆಲಕ್ಕೆ ಬಿತ್ತು.

ಬ್ರಹಜ್ಜಬಾಲ ಉಪನಿಷದ್ ಪ್ರಕಾರ ರುದ್ರ ವಿಶ್ವನಾಶಕ್ಕೆ ಮೂರನೇ ಕಣ್ಣನ್ನು ತೆರೆದ. ನಂತರ ಮುಚ್ಚಿದಾಗ ಉದುರಿದ ಕಣ್ಣೀರಿನ ಹನಿಯೇ ರುದ್ರಾಕ್ಷಿ.

ಒಂದೊಂದು ರುದ್ರಾಕ್ಷಿಗೂ ತನ್ನದೇ ಆದ ವಿಶೇಷ ಶಕ್ತಿಯಿದೆಯಂತೆ. ಅದನ್ನು ಧರಿಸಿದರೆ ಹಲವು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಎಂದರು. ಪ್ರತಿಯೊಂದು ರುದ್ರಾಕ್ಷಿಗೂ ಪ್ರತ್ಯೇಕ ಮಂತ್ರ ಇದೆ ಎಂದು ವಿವರಿಸಿವ pamphlet ಕೊಟ್ಟರು.

Tuesday, December 2, 2008

ತಲೆ ಕೆಳಗಾದ ಮುಖ!!

ಮೊನ್ನೆ ರಾತ್ರಿ ಬಾನಿನಲ್ಲಿ ಎಲ್ಲರಿಗೂ ಕಂಡ ನಗು ಮುಖ ನಮಗೆ ಇವತ್ತಾದರೂ ಕಾಣಿಸುತ್ತೋ ಇಲ್ಲವೋ ಅಂತ ಕತ್ತಲಾಗುವದನ್ನೇ ಕಾಯುತ್ತಿದ್ದೆ. ಹೊರಗಡೆ ಹೋದಾಗ ಆಕಾಶದಲ್ಲಿ ಮೋಡವಿಲ್ಲದ್ದು ಕಂಡು ಖುಶಿ ಆಯಿತು. ಹುಡುಕುತ್ತಿದ್ದ ಮುಖ ದರ್ಶನವಾದಾಗ ನಿಧಿ ಸಿಕ್ಕವಳಂತೆ ರೋಡಿನಲ್ಲೇ ಕುಣಿದಾಡಿದೆ. ಅಮೇರಿಕಾದಲ್ಲಿ ಸಪ್ಪೆ ಮೊರೆ ಕಾಣಿಸುವುದಾಗಿ ನ್ಯೂಸ್-ನಲ್ಲಿ ಹೇಳಿದ್ದರು, ಇಲ್ಲಿ ನನಗೆ ಕಂಡದ್ದು ತಲೆ ಕೆಳಗಾದ ಮುಖ!! ಇಲ್ಲಿನ ಆರ್ಥಿಕ ಪರಿಸ್ತಿಥಿಯನ್ನು ಬಿಂಬಿಸುತ್ತಿದೆಯೋ ಏನೋ ಅನ್ನಿಸಿತು.

ಮನೆಯೊಳಗೆ ಓಡಿ ಬಂದು ಕ್ಯಾಮೆರಾ ಹಿಡಿದು ರೋಡಿಗೆ ದೌಡಾಯಿಸಿದೆ. ನೆಗಡಿ ಇದ್ದರಿಂದ ಹೇಮಂತ್ ಹೆಚ್ಚು ಹೊತ್ತು ಫೋಟೋ ತೆಗೆಯುತ್ತಾ ಹೊರಗೆ ನಿಲ್ಲಲಿಲ್ಲ. ನಾನೇ ಫೋಟೋ ತೆಗೆಯಲು ಪ್ರಯತ್ನಿಸಿದೆ, ಅಷ್ಟೇನು ಚೆನ್ನಾಗಿಲ್ಲ...



ಇದ್ದುದರಲ್ಲಿ ವಿಡೀಯೋ ಪರವಾಗಿಲ್ಲ ಅನಿಸುತ್ತೆ. ಅದನ್ನೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.