Pages

Tuesday, December 2, 2008

ತಲೆ ಕೆಳಗಾದ ಮುಖ!!

ಮೊನ್ನೆ ರಾತ್ರಿ ಬಾನಿನಲ್ಲಿ ಎಲ್ಲರಿಗೂ ಕಂಡ ನಗು ಮುಖ ನಮಗೆ ಇವತ್ತಾದರೂ ಕಾಣಿಸುತ್ತೋ ಇಲ್ಲವೋ ಅಂತ ಕತ್ತಲಾಗುವದನ್ನೇ ಕಾಯುತ್ತಿದ್ದೆ. ಹೊರಗಡೆ ಹೋದಾಗ ಆಕಾಶದಲ್ಲಿ ಮೋಡವಿಲ್ಲದ್ದು ಕಂಡು ಖುಶಿ ಆಯಿತು. ಹುಡುಕುತ್ತಿದ್ದ ಮುಖ ದರ್ಶನವಾದಾಗ ನಿಧಿ ಸಿಕ್ಕವಳಂತೆ ರೋಡಿನಲ್ಲೇ ಕುಣಿದಾಡಿದೆ. ಅಮೇರಿಕಾದಲ್ಲಿ ಸಪ್ಪೆ ಮೊರೆ ಕಾಣಿಸುವುದಾಗಿ ನ್ಯೂಸ್-ನಲ್ಲಿ ಹೇಳಿದ್ದರು, ಇಲ್ಲಿ ನನಗೆ ಕಂಡದ್ದು ತಲೆ ಕೆಳಗಾದ ಮುಖ!! ಇಲ್ಲಿನ ಆರ್ಥಿಕ ಪರಿಸ್ತಿಥಿಯನ್ನು ಬಿಂಬಿಸುತ್ತಿದೆಯೋ ಏನೋ ಅನ್ನಿಸಿತು.

ಮನೆಯೊಳಗೆ ಓಡಿ ಬಂದು ಕ್ಯಾಮೆರಾ ಹಿಡಿದು ರೋಡಿಗೆ ದೌಡಾಯಿಸಿದೆ. ನೆಗಡಿ ಇದ್ದರಿಂದ ಹೇಮಂತ್ ಹೆಚ್ಚು ಹೊತ್ತು ಫೋಟೋ ತೆಗೆಯುತ್ತಾ ಹೊರಗೆ ನಿಲ್ಲಲಿಲ್ಲ. ನಾನೇ ಫೋಟೋ ತೆಗೆಯಲು ಪ್ರಯತ್ನಿಸಿದೆ, ಅಷ್ಟೇನು ಚೆನ್ನಾಗಿಲ್ಲ...



ಇದ್ದುದರಲ್ಲಿ ವಿಡೀಯೋ ಪರವಾಗಿಲ್ಲ ಅನಿಸುತ್ತೆ. ಅದನ್ನೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

Monday, December 1, 2008

ಬಾನಿನಲ್ಲೊಂದು ನಗು ಮುಖ :)

ಪ್ರತಿ ವರ್ಷ ಥ್ಯಾಂಕ್ಸ್ ಗೀವಿಂಗ್ ಗೆ ಇಲ್ಲಿ ಅಮೇರಿಕೆಯಲ್ಲಿ ಕುಟುಂಬದ ಸದಸ್ಯರೆಲ್ಲಾ ಒಂದೆಡೆ ಸೇರುತ್ತಾರೆ. ಇದೇ ಸಮಯಕ್ಕೆ ಈ ವರ್ಷ ಬಾನಿನಲ್ಲಿ ಚಂದಿರ, ಗುರು ಮತ್ತು ಶುಕ್ರ ಗ್ರಹಗಳು ಒಂದೆಡೆ ಕೂಡಿ ನಮ್ಮನ್ನೋಡಿ ನಗೆ ಚೆಲ್ಲುವುದೆಂದು ಹಲವು ದಿನಗಳಿಂದ ನ್ಯೂಸ್ ನಲ್ಲಿ ಬರ್ತಾಯಿತ್ತು.


252,000 ಮೈಲಿ ದೂರವಿರುವ ಚಂದಿರ ಈ ಮೂವರಲ್ಲಿ ನಮಗೆ ತೀರಾ ಹತ್ತಿರದಲ್ಲಿರುವ ಮತ್ತು ಚಿಕ್ಕದಾದ್ದು. ಗುರು ನಮ್ಮಿಂದ 94 million ಮೈಲಿ ದೂರದಲ್ಲಿದ್ದರೆ ಶುಕ್ರ 540 million ಮೈಲಿಗಳು. ಈ ಮೂರು ಆಗಾಗ್ಗೆ ಒಂದರ ಹತ್ತಿರ ಒಂದು ಬರುತ್ತಾವಾದ್ರೂ ಬಹಳಷ್ಟು ಸಲ ಹಾಗಾದಾಗ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವುದರಿಂದ ನಮಗೆ ಈ ಮಿಲನ ಕಾಣಿಸುವುದಿಲ್ಲ. ಈ ಸುಂದರ ಮಿಲನ ಮತ್ತೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವುದು Nov. 18, 2052ರಲ್ಲಿ ಅನ್ನುತ್ತಾರೆ ಮೈಯಾಮಿ ಪ್ಲಾನೆಟೇರಿಯಂನ ನಿರ್ದೇಶಕ ಜ್ಯಾಕ್ ಹಾರ್ಕ್-ಹೀಮರ್ ಅವರು.

ಇದನ್ನು ನೋಡಲು ಬಲು ಕಾತುರದಿಂದ ಕಾಯುತ್ತಿದ್ದೆವು ಆದರೆ ಈಗಿಲ್ಲಿ ಮೋಡಕವಿದ ವಾತಾವರಣವಿದ್ದು ನಿನ್ನೆ ಏನೂ ಕಾಣಿಸಲಿಲ್ಲ. ಇಂದು ಅಂತರ್ಜಾಲದಲ್ಲಿ ಎಲ್ಲೆಡೆ ಆ ಸುಂದರ ದೃಶ್ಯದ ಚಿತ್ರಗಳು ಭಿತ್ತರಿಸಿವೆ. ಮೈಸೂರಿನಲ್ಲಿರುವ ಗೆಳೆಯರು ತಾವು ತೆಗೆದ ಈ ಅಪುರೂಪದ ಫೋಟೋಗಳನ್ನ ತಮ್ಮ ಬ್ಲಾಗಿನಲ್ಲೇರಿಸಿದ್ದಾರೆ. ಈ ಚಿತ್ರಗಳನ್ನ ನೋಡ್ತಾಯಿದ್ದ್ರೆ ಡ್ರೀಮ್-ಲ್ಯಾಂಡ್-ನಲ್ಲಿರುವ ಅನುಭವ ಆಗುತ್ತೆ. ಪ್ರಕೃತಿಯ ಸೊಬಗು ಹಣ್ಣಿಗೆ ಹಬ್ಬ ಅಲ್ವ. ಅಂತೆಯೇ ಸಿನೆಮಾಗಳಲ್ಲಿ ಹಾಡಿನ ಸನ್ನಿವೇಶಕ್ಕೆಂದು ತಾರೆಗಳ ಸೆಟ್ಟಿಂಗ್ ನೆನಪಾಯ್ತು. ಇಂದು ಸಂಜೆಗಾದರೂ ನಮಗೆ ಈ ಅಪುರೂಪದ ದೃಶ್ಯ ನೋಡೋ ಭಾಗ್ಯ ಸಿಗುತ್ತಾ ಕಾದು ನೋಡಬೇಕು.



ಆಸ್ಟ್ರೇಲಿಯಾದಲ್ಲಿ ಜನರು ಸೆರೆ ಹಿಡಿದ ಚಿತ್ರಗಳು ಇಲ್ಲಿವೆ. ಹಾಂಗ್-ಕಾಂಗ್ ನಲ್ಲಿರುವ ಗೆಳೆಯರೊಬ್ಬರು ಕಳುಹಿಸಿದ ಫೋಟೋ ಇದು.
ಈ ಫೋಟೋಗಳಂತೆಯೇ ಬಾನಿನಲ್ಲಿ ನಗು ಮುಖ ಮೂಡಿಸಿದ ಇನ್ನು ಕೆಲವು ಫೋಟೋಗಳು ಕೆಲಗಿವೆ ನೋಡಿ. ಯಾವಾಗಲೋ ಅಂತರ್ಜಾಲದಲ್ಲಿ ನೋಡಿದ್ದ ಚಿತ್ರಗಳಿವು, ನನ್ನ ಕಂಪ್ಯೂಟರ್ ನಲ್ಲಿದ್ದವು, ಇವನ್ನು ಸೆರೆಹಿಡಿದು ನಮಗಾಗಿ ಅಂತರ್ಜಾಲದಲ್ಲಿ ಹಾಕಿದವರಿಗೆ ನನ್ನ ಅಭಿನಂದನೆಗಳು.



ಮೋಡಗಳು ನಮ್ಮನ್ನು ನೋಡಿ ನಗೋದು ಹೀಗೆ.
ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳ ನಗೆ.
ಏರ್ ಶೋ ಸಮಯದಲ್ಲಿ ಬಂದ ಪ್ರೇಕ್ಷಕರನ್ನು ವಿಮಾನಗಳು ಸ್ವಾಗತಿಸಿದ್ದು ಹೀಗೆ.

Friday, November 14, 2008

ಮಕ್ಕಳ ದಿನಾಚರಣೆ ಶುಭಾಶಯಗಳು !!


ಜವಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳು ಮತ್ತು ಹೂವುಗಳನ್ನು ಹೋಲಿಸುತ್ತಿದ್ದ ನೆಹರು, "ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು" ಎನ್ನುತ್ತಿದ್ದರಂತೆ. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರು ಅಭಿಮತ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಚಾಚಾ ನೆಹರೂ ಅವರು ಮಕ್ಕಳಿಗಾಗಿ ಬರೆದ ಒಂದು ಪತ್ರ ಎಲ್ಲೋ ಓದಿದ್ದೆ, ಅದನ್ನು ನನ್ನ ಕಂಪ್ಯುಟರ್’ನಲ್ಲಿ ಉಳಿಸಿಕೊಂಡಿದ್ದೆ. ಇಲ್ಲಿದೆ ಆ ಪತ್ರ :


ಡಿಸೆಂಬರ್ 03, 1949

ಮುದ್ದು ಪುಟಾಣಿಗಳೇ,
ನಗೆ ಮಕ್ಕಳೊಂದಿಗೆ ಒಡನಾಟ ಬಲು ಇಷ್ಟ. ಮಕ್ಕಳೊಂದಿಗೆ ಮಾತುಕತೆ, ನಗುನಗುತ್ತಾ ಸಮಯ ಕಳೆಯೋದು, ಆಟವಾಡುವುದು... ನನಗಿಷ್ಟ. ಮಕ್ಕಳ ಜೊತೆಗಿದ್ದರೆ ಒಂದು ಕ್ಷಣ ನಾನೊಬ್ಬ ಇಳಿವಯಸ್ಸಿನವ ಎಂಬುದನ್ನು ಮರೆತೇಬಿಡುತ್ತೇನೆ, ನನ್ನ ಬಾಲ್ಯದ ದಿನಗಳು ಎಂದೋ ಕಳೆದಿವೆ ಎನ್ನುವ ಪರಿವೆಯೂ ಇರುವುದಿಲ್ಲ. ಆದರೆ ಪ್ರೀತಿಯಿಂದ ನಿಮಗೆ ಪತ್ರ ಬರೆಯಲು ಪೆನ್ನು ಹಿಡಿದಾಗ ನನ್ನ ವಯಸ್ಸು, ನಿಮ್ಮ-ನನ್ನ ನಡುವಿನ ಅಂತರ ಹಾಗೂ ನಮ್ಮ ನಡುವಿನ ನಿಜ ವ್ಯತ್ಯಾಸ ಮರೆಯಲಾಗದು. ಕಿರಿಯರಿಗೆ ಉಪದೇಶ ಮತ್ತು ಸಲಹೆ ನೀಡುವುದೇ ಹಿರಿಯರ ಅಭ್ಯಾಸ. ನನಗಿನ್ನೂ ನೆನಪಿದೆ, ಪುಟ್ಟ ಹುಡುಗನಾಗಿದ್ದಾಗ ನನಗೂ ಇಂಥ ಉಪದೇಶಗಳೆಂದರೆ ಕಿರಿಕಿರಿ. ಈಗ ನನ್ನ ಮಾತುಗಳೂ ನಿಮಗೆ ಹಿಡಿಸದೆ ಇರಬಹುದು.ಇತರರ ಮಾತುಗಳನ್ನು ಆಲಿಸಿದಾಗಲೆಲ್ಲಾ ನಾನೊಬ್ಬ ಜ್ಞಾನಿ, ಬುದ್ಧಿವಂತ ಹಾಗೂ ಪ್ರಮುಖ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದೆ. ಆದರೆ ನನ್ನ ನಿಜ ವ್ಯಕ್ತಿತ್ವದ ಕಡೆ ದೃಷ್ಟಿ ಹರಿಸಿದಾಗೆಲ್ಲಾ ಆ ಬಗ್ಗೆ ಅನುಮಾನ ಮೂಡುತ್ತಿತ್ತು. ಅನೇಕ ಬಾರಿ ಜನರು ಎಷ್ಟೇ ಶ್ರೇಷ್ಠ ಜ್ಞಾನಿಗಳಾಗಿರಲಿ, ತಮ್ಮ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಹಾಗಿದ್ದಲ್ಲಿ ನಾನೇನು ಬರೆಯಲಿ? ಸುತ್ತ ಮುತ್ತಲಿನ ಈ ಅಭೂತಪೂರ್ವ ಸೌಂದರ್ಯ... ಎಲ್ಲವನ್ನೂ ಮರೆಯುವ ನಾವು ಅಥವಾ ನಮ್ಮ ಹಿರಿಯರು ನಮ್ಮದೇ ವಾದ-ವಿವಾದ ಮಂಡಿಸುತ್ತಾ ಕಾಲಹರಣ ಮಾಡಿ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಚೇರಿಯಲ್ಲಿ ಕುಳಿತು ಮಹತ್ಕಾರ್ಯ ಮಾಡುತ್ತಿದ್ದೇವೆ ಎಂದುಕೊಳ್ಳುತ್ತೇವೆ.ಆದರೆ ನನಗೆ ಗೊತ್ತು. ನೀವೆಲ್ಲಾ ತುಂಬಾ ಬುದ್ಧಿವಂತರು, ನಿಮ್ಮ ಕಣ್ಣು ಮತ್ತು ಕಿವಿಗಳು ಜಗತ್ತಿನ ಸೌಂದರ್ಯ ಮತ್ತು ಸುತ್ತಲಿನ ಬದುಕನ್ನು ಆಸ್ವಾದಿಸಲು ತೆರೆದೇ ಇರುತ್ತದೆ. ಒಂದು ಸುಂದರ ಹೂವನ್ನು ಅದರ ನಾಮಧೆಯದಿಂದ ಗುರುತಿಸುವಿರಾ ಅಥವಾ ಹಕ್ಕಿಯೊಂದು ಹಾಡುತ್ತಿದ್ದರೆ ಆ ಹಕ್ಕಿಯ ಹೆಸರು ಹೇಳಬಲ್ಲಿರಾ? ಅವುಗಳೊಂದಿಗೆ ಅದೆಷ್ಟು ಸರಳವಾಗಿ ಸ್ನೇಹ ಬೆಳೆಸುತ್ತೀರಿ. ಅಥವಾ ಒಂದಿಷ್ಟು ಪ್ರೀತಿಯಿಂದ ಬಳಿ ಸರಿದರೆ ಸಾಕು ಪ್ರಕೃತಿಯ ಪ್ರತಿ ಜೀವ-ಜಂತುಗಳೂ ನಿಮ್ಮ ಒಡನಾಡಿಯಾಗಬಲ್ಲವು. ಆದರೆ ನಾವು ಹಿರಿಯರು ನಮ್ಮದೇ ಸೀಮಿತ ವಲಯದೊಳಗೆ ಬದುಕು ಸವೆಸುತ್ತೇವೆ. ಹಿರಿಯರು ತಮ್ಮ-ತಮ್ಮೊಳಗೆ ಧರ್ಮ, ಜಾತಿ, ವರ್ಣ, ಪಕ್ಷ, ರಾಷ್ಟ್ರ, ಪ್ರಾಂತ್ಯ, ಭಾಷೆ, ಪದ್ಧತಿ ಮತ್ತು ಬಡವ-ಬಲ್ಲಿದರೆಂಬ ತಡೆಗೋಡೆಗಳನ್ನು ನಿರ್ಮಿಸಿರುತ್ತಾರೆ. ಸ್ವತಃ ತಾವೇ ನಿರ್ಮಿಸಿದ ಕಾರಾಗೃಹದಲ್ಲಿ ಬದುಕು ಸವೆಸುತ್ತಾರೆ. ಅದೃಷ್ಟವಶಾತ್ ಮುಗ್ಧ ಮಕ್ಕಳು ಈ ತಡೆಗೋಡೆಗಳ ಬಗ್ಗೆ ಹೆಚ್ಚೇನೂ ಅರಿಯಲಾರರು. ಅವರು ಜೊತೆಯಾಗಿ ಆಡುತ್ತಾರೆ, ಜೊತೆಯಾಗಿ ನಲಿಯುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಆದರೆ ಮಕ್ಕಳು ಬೆಳೆದು ಪ್ರೌಢಾವಸ್ಥೆಗೆ ತಲುಪಿದ ಮೇಲೆ ಈ ತಡೆಗೋಡೆಗಳ ಬಗ್ಗೆ ಕಲಿಯಲಾರಂಭಿಸುತ್ತಾರೆ. ನನಗೊಂದು ನಂಬಿಕೆಯಿದೆ; ನೀವು ಬೆಳೆಯಲು ಇನ್ನೂ ತುಂಬಾ ವರ್ಷಗಳೇ ಬೇಕಾಗಬಹುದು ಎಂಬ ವಿಶ್ವಾಸವದು.ಪುಟಾಣಿಗಳೇ, ನಮ್ಮ-ನಿಮ್ಮ ನಡುವೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆಂಬುವುದು ನಿಮಗೂ ಗೊತ್ತಲ್ಲ? ಅವರೇ ರಾಷ್ಟ್ರಪಿತ ಮಹಾತ್ಮಗಾಂಧಿ. ಇವರನ್ನು ನಾವು ಪ್ರೀತಿಯಿಂದ ಬಾಪೂಜಿ ಎನ್ನುತ್ತೇವೆ. ಅವರೊಬ್ಬ ಮಹಾನ್ ಜ್ಞಾನಿ. ಆದರೆ ಅವರೆಂದೂ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿಲ್ಲ. ಬಲು ಸರಳ ಮತ್ತು ಮಕ್ಕಳಂಥ ಮುಗ್ಧ ಮನಸ್ಸು ಅವರದು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಎಷ್ಟೋ ಬಾರಿ, ನಗುನಗುತ್ತಲೇ ಜಗತ್ತನ್ನು ಎದುರಿಸಲು ಸಿದ್ಧರಾಗಿ ಎಂಬ ನೀತಿಪಾಠವನ್ನು ನಮಗೆ ಬೋಧಿಸುತ್ತಿದ್ದರು.ನಮ್ಮದು ಬೃಹತ್ ರಾಷ್ಟ್ರ, ನಾವೆಲ್ಲರೂ ದೇಶ ಸೇವೆ ಮಾಡಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಅಳಿಲು ಸೇವೆ ಮಾಡಿದರೂ ಸಾಕು, ಭಾರತ ಉಜ್ವಲವಾಗಿ ಬೆಳಗಲಿದೆ. ನನ್ನ ಪಕ್ಕದಲ್ಲೇ ಕುಳಿತು ನನ್ನೆಲ್ಲಾ ಮಾತುಗಳನ್ನು ಪ್ರೀತಿಯಿಂದ ಆಲಿಸುತ್ತಿದ್ದೀರೆಂದು ಭಾವಿಸಿ, ಪತ್ರದ ಮೂಲಕ ನನ್ನೆಲ್ಲಾ ಪ್ರೀತಿಯನ್ನು ಅರುಹುತ್ತಿದ್ದೇನೆ. ನಾನು ಹೇಳಬೇಕೆಂದು ಬಯಸಿದ್ದಕ್ಕಿಂತ ಹೆಚ್ಚು ವಿಷಯಗಳನ್ನೇ ಈ ಪತ್ರದಲ್ಲಿ ತುರುಕಿದ್ದೇನೆ.
ಪ್ರೀತಿಯಿಂದ,

ಜವಹರಲಾಲ್ ನೆಹರು


ಅಂದ ಹಾಗೆ ನವೆಂಬರ್ ಇಪ್ಪತ್ತರಂದು ವಿಶ್ವ ಮಕ್ಕಳ ದಿನಾಚರಣೆ. ನಮ್ಮ ಭಾರತದಲ್ಲಿ ಮಾತ್ರ ನವೆಂಬರ್ ಹದಿನಾಲ್ಕು. ಈ ತಿಂಗಳು ಜಗತ್ತಿನ ಎಲ್ಲಾ ಮಕ್ಕಳಿಗೂ ಮಕ್ಕಳಹಬ್ಬದ ಶುಭಾಶಯಗಳು. ಕಲ್ಮಶವರಿಯದ ಮುಗ್ಧ ಮಕ್ಕಳ ನಗು ನಮಗೆಲ್ಲಾ ಚೇತನ. ಈ ನಗು ಮಕ್ಕಳ ಮೊಗದಲ್ಲಿ ಸದಾ ಇರಲಿ. :)

Wednesday, November 5, 2008

ಸಾವು ಕೊನೆಯಲ್ಲ ...

ಕೋಣೆಯ ತುಂಬಾ ಮೌನ ಆವರಿಸಿತ್ತು. ಸವಿತಾಳ ಅಳುವಿನ ಸಣ್ಣದನಿಯೊಂದೇ ಆಗಾಗ್ಗೆ ಆ ಮೌನ ಮುರಿಯುತ್ತಿತ್ತು. ಹಾಸಿಗೆಯ ಮೇಲೆ ಮಲಗಿದ್ದ ತನ್ನ ಕಂದನನ್ನು ನೋಡಿ ಮತ್ತೆ ಮತ್ತೆ ಬಿಕ್ಕಳಿಸುತ್ತಿದ್ದಳು. ತನ್ನ ಮುದ್ದು ಅವಿನಾಶ್ ಇನ್ನಿಲ್ಲವೆಂದು ಡಾಕ್ಟರ್ ಆಗಷ್ಟೆ ಹೇಳಿದ ಮಾತನ್ನು ನಂಬಲು ಅವಳಿಂದ ಆಗುತ್ತಿಲ್ಲ. "ಆ ದೇವರು ಇಷ್ಟು ಕ್ರೂರಿ ಆಗಲು ಹೇಗೆ ಸಾಧ್ಯ? ಈ ಎಳೆ ಕಂದಮ್ಮನಿಗೆ ಈ ಘೋರ ಶಿಕ್ಷೆ ಏಕೆ?" ಎಂದೆಲ್ಲಾ ಯೋಚಿಸುತ್ತಾ ಮಲಗಿದ್ದ ಮಗನ ದೇಹ ದಿಟ್ಟಿಸಿ ಕಣ್ಣೀರೊರೆಸಿಕೊಂಡಳು. "ಅವಿ, ನಾ ನಿನ್ನ ಸಾಯೋಕೆ ಬಿಡೋಲ್ಲ ಪುಟ್ಟು, ಯಾರ್ ಏನೇ ಹೇಳಿದರೂ ಸರಿ ನೀನು ಸಾಯುವುದಿಲ್ಲ" ಸವಿತ ಬಡಬಡಿಸುತ್ತಾ ಹಾಸಿಗೆಯ ತುದಿಯಲ್ಲಿ ಕುಸಿದಳು.





ಉಲ್ಲಾಸ್ ಜೊತೆ ಮಾತನಾಡುತ್ತಾ ಕೋಣೆಗೆ ಬಂದರು ಪ್ರಖ್ಯಾತ ಮಕ್ಕಳ ವೈದ್ಯ ಡಾ. ಹರ್ಷ. ಸವಿತಾಳನ್ನು ಕಂಡು ಉಲ್ಲಾಸ್ "ಡಾ. ಹರ್ಷ ನಿನ್ನೊಂದಿಗೆ ಮಾತಾಡಲು ಬಂದಿದ್ದಾರೆ ಸವಿತ, ನೋಡಿಲ್ಲಿ" ಎಂದವಳನ್ನು ಎತ್ತಿ ಕೂರಿಸಿದನು. ಡಾಕ್ಟರ್’ನ್ನು ಹತಾಶಳಾಗಿ ನೋಡುತ್ತಾ "ಏನು, ಇನ್ನೇನಿದೆ ನೀವು ಹೇಳಲಿಕ್ಕೆ?" ಅಂದಳು. "ನೋಡಿ ಸವಿತ ಅವರೆ, ನಿಮ್ಮ ದುಃಖ ನನಗೆ ಅರ್ಥವಾಗುತ್ತದೆ. ನಮ್ಮ ಪ್ರಯತ್ನ ನಾವು ಮಾಡಿದ್ವಿ, ಈಗ ನಾವು ಅವಿನಾಶ್’ನ ದೇಹವನ್ನು ತಗೊಂಡು ಹೋಗಬೇಕು". ಅವರ ಮಾತಿನ್ನೂ ಪೂರ್ತಿಗೊಳ್ಳುವ ಮುಂಚೆಯೇ "ಇಲ್ಲಾಆಆಆಆ" ಎಂದು ಅರಚುತ್ತಾ ಎದ್ದ ಸವಿತ ಮಗನ ದೇಹವನ್ನು ಬಿಗಿದಪ್ಪಿ "ನೀವ್ಯಾರೂ ನನ್ನ ಕಂದನನ್ನು ಮುಟ್ಟಬೇಡಿ, ಯಾರಿಗೂ ಅವನನ್ನು ಮುಟ್ಟಲು ನಾ ಬಿಡೊಲ್ಲ. ಅವನು ನನ್ನ ಬಿಟ್ಟು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ". "ಸಮಾಧಾನ ಮಾಡಿಕೊಳ್ಳಿ ಸವಿತ, ನಿಜ ಸ್ಥಿತಿಯನ್ನು ಅರಿಯಿರಿ. ಅವಿನಾಶ್ ಇನ್ನಿಲ್ಲ ಅನ್ನೋದು ನಿಜ ". ಡಾಕ್ಟರ್ ಮಾತು ಕೇಳಿ ಸವಿತ "ಇನ್ನೊಂದು ಸ್ವಲ್ಪ ಹೊತ್ತು ನನ್ನ ಮಗನೊಂದಿಗೆ ಇರಲು ಬಿಡಿ" ಎಂದು ಅಂಗಲಾಚಿದಳು. "ನಿಮ್ಮ ಮಾತು, ನೋವು ನನಗೆ ಅರ್ಥವಾಗುತ್ತದೆ ಸವಿತ ಅವರೆ, ಆದರೆ ಈಗ ನೀವು ಯೊಚಿಸಬೇಕಾದ್ದ ಮತ್ತೊಂದು ಮುಖ್ಯ ವಿಚಾರವಿದೆ. ನೀವು ಇಷ್ಟಪಟ್ಟಲ್ಲಿ ಅವಿನಾಶ್ ಅಂತಹ ಹಲವು ಮಕ್ಕಳಿಗೆ ನೀವು ಸಹಾಯ ಮಾಡಬಹುದು". ಅವರ ಮಾತು ಅರ್ಥವಾಗದೆ ಅವರನ್ನು ಪ್ರಶ್ನಾರ್ಥವಾಗಿ ದಿಟ್ಟಿಸುತ್ತಾ ಕುಳಿತಳು. "ನಮ್ಮಲ್ಲಿ ಅವಿನಾಶ್’ನಂತೆಯೇ ಹೃದಯ ತೊಂದರೆಯಿಂದ ಬಳಲುತ್ತಿರುವ ಹಲವು ಮಕ್ಕಳಿದ್ದಾರೆ. ಅವರಿಗೆ ಸುಸ್ಥಿತಿಯಲ್ಲಿರುವ ಅಂಗಾಗಗಳು ಬೇಕು. ಹಾಗೆಯೆ ಅಂಧ ಮಕ್ಕಳಿಗೆ ನಿಮ್ಮ ಅವಿನಾಶನ ಕಣ್ಣುಗಳು ಬೆಳಕಾಗಬಲ್ಲವು". "ಇಲ್ಲ, ನನ್ನ ಮುದ್ದು ಕಂದನಿಗೆ ನೀವ್ಯಾರು ಇನ್ನೂ ಹಿಂಸೆ ಮಾಡಬೇಡಿ. ಅವನು ಇನ್ನಾದರೂ ನೆಮ್ಮದಿಯಿಂದಯಿರಲಿ. ಅವನ ಹತ್ತಿರ ನಾನ್ಯಾರನ್ನೂ ಬಿಡೋಲ್ಲ" ಉಲ್ಲಾಸ್ ಸವಿತಾಳನ್ನು ಅಪ್ಪಿಹಿಡಿದು ಸಾಂತ್ವಾನಗೊಳಿಸಲು ಪ್ರಯತ್ನಿಸುತ್ತಾ ಅವಳನ್ನು ಕೋಣೆಯಿಂದ ಹೊರಗೆ ಕರೆದೊಯ್ದ, ಹಾಗೆಯೆ ಡಾಕ್ಟರ್’ಗೆ ಕಣ್ಣ್’ಸನ್ನೆಯಲ್ಲಿ ತನ್ನ ಸಮ್ಮತಿ ತಿಳಿಸಿದ.





ಆಫೀಸ್’ನಿಂದ ಬಂದ ಉಲ್ಲಾಸ್ ಕೈಯಲ್ಲಿ ಅವಿನಾಶನ ಫೋಟೋ ಹಿಡಿದು ಅಳುತ್ತಾ ಸೋಫಾದ ಮೇಲೆ ಮಲಗಿದ್ದ ಸವಿತಾಳನ್ನು ಕಂಡು "ಸವಿತ, ಸಾಕು ಮಾಡು ಈ ಅಳು, ಆಗಲೇ ೨ ವಾರ ಆಯಿತು. ಬಾ ಆಸ್ಪತ್ರೆಗೆ ಹೋಗಿ ಬರೋಣ" ಅನ್ನುತ್ತಾ ಅವಳನ್ನು ಎಬ್ಬಿಸಿದನು. "ಈಗೇನಿದೆ ಅಲ್ಲಿ ನಮಗೆ ಕೆಲಸ? ನಾನಲ್ಲಿಗೆ ಬರೋಲ್ಲ, ಅವರೆಲ್ಲ ನನ್ನ ಅವಿಯನ್ನು ನನ್ನಿಂದ ದೂರ ಮಾಡಿದರು. ಕೊನೆಗೆ ಅವನಿಗೆ ಚಿತ್ರಹಿಂಸೆ ಕೊಟ್ಟರು." "ನೀನಲ್ಲಿ ನೋಡಬೇಕಾದ್ದು ಇದೆ ಸವಿತ, ನನ್ನ ಮಾತು ನಂಬು, ನನಗೋಸ್ಕರ ಆದ್ರೂ ಬಾ" ಎನ್ನುತ್ತಾ ಅವಳನ್ನು ಹೊರಡಿಸಿದ.





ಆಸ್ಪತ್ರೆಯಲ್ಲಿ ಸೀದಾ ಡಾ. ಹರ್ಷರ ಕೋಣೆಗೆ ನಡೆದರು. ಇವರ ಬರುವಿಕೆಯನ್ನೆ ಎದುರು ನೋಡುತ್ತಿವರಂತೆ ಹರ್ಷ "ಬನ್ನಿ, ನಿಮಗಾಗಿಯೇ ಕಾಯುತ್ತಿದ್ದೆ. ಹೇಗಿದ್ದೀರಾ ಸವಿತ? ಬನ್ನಿ ಹೋಗೋಣ" ಅನ್ನುತ್ತಾ ಲಿಫ್ಟ್’ನಲ್ಲಿ ಮೂರನೆ ಮಹಡಿಗೆ ಕರೆದೊಯ್ದರು. ಏನಾಗುತ್ತಿದೆ ಅಂತ ತಿಳಿಯದೆ ಸವಿತ "ನಾವೆಲ್ಲಿಗೆ ಹೋಗುತ್ತಿದ್ದೇವೆ ಉಲ್ಲಾಸ್" ಎಂದು ಪ್ರಸ್ನಿಸಿದಳು, ಅಷ್ಟರಲ್ಲಿ ಅವರು ಪೋಸ್ಟ್-ಆಪರೇಟೀವ್ ವಾರ್ಡಿಗೆ ಬಂದಿದ್ದರು. ಡಾ.ಹರ್ಷರನ್ನು ನೋಡುತ್ತಿದ್ದಂತೆಯೇ ನರ್ಸ್ ಮಕ್ಕಳನ್ನು ಅವರ ಬಳಿ ಕರೆತಂದಳು. ಸವಿತಾಳಿಗೆ ಇದೇನು ಅರ್ಥವಾಗುತ್ತಿಲ್ಲ, "ಈ ಮಕ್ಕಳು ಯಾರು? ನನ್ನ ಬಳಿ ಏಕೆ ಕರೆತಂದರು, ಇದೆಲ್ಲ ಏನು" ಅಂತ ಉಲ್ಲಾಸನ ಕಡೆ ತಿರುಗಿದಾಗ "ಆ ಹುಡುಗಿಯ ಕಣ್ಣು ನೋಡು ಸವಿತ" ಅಂದನು. ಗೊಂದಲಗೊಂಡ ಸವಿತ ಉಲ್ಲಾಸ್ ತೋರಿಸಿದ ಹುಡುಗಿಯತ್ತ ಮತ್ತೊಮ್ಮೆ ನೋಡಿದಳು. ಇದು ಸಾಧ್ಯನಾ? ಅದೇ ಸುಂದರ ಕಣ್ಣುಗಳು, ತನ್ನ ಅವಿನಾಶನ ಕಣ್ಣುಗಳು. ತನಗೇ ಗೊತ್ತಿಲ್ಲದಂತೆ "ಅವಿ....." ಎಂದು ಕಿರುಚುತ್ತಾ ಆ ಹುಡುಗಿಯನ್ನು ಬಿಗಿದಪ್ಪಿ ಮುದ್ದಾಡಿದಳು. ಅಷ್ಟರಲ್ಲಿ ಉಲ್ಲಾಸ್ ಮತ್ತೊಬ್ಬ ಹುಡುಗನನ್ನು ಸವಿತಳ ಬಳಿ ಕರೆತಂದನು. ಸವಿತ ಆ ಮಗುವನ್ನು ಅಪ್ಪುತ್ತಿದ್ದಂತೆಯೇ ಹೃದಯ ಬಡಿತ ಲಬ್-ಡಬ್ ಲಬ್-ಡಬ್ ಕೇಳಿಸಲಾರಂಭಿಸಿತು ಆದರದು ಅವಳ ಕಿವಿಗೆ ಅಮ್ಮ ಅಮ್ಮ ಎಂದು ಕೇಳಿಸಿತು.



ಚಕಿತಳಾದ ಸವಿತ ಉಲ್ಲಾಸನ ಮುಖ ನೋಡಿದಳು. "ಹೌದು ಸವಿತ, ನಮ್ಮ ಅವಿಯ ಹೃದಯವದು. ನಾವು ಒಬ್ಬ ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದೆವು. ಈಗ ನೋಡು ನಮ್ಮ ಅವಿ ಇವರೆಲ್ಲರಲ್ಲಿ ಬದುಕಿದ್ದಾನೆ." ತನ್ನ ಕಣ್ಣೀರೊರೆಸಿಕೊಳ್ಳುತ್ತಾ ಸವಿತ "ಹೌದು ನನ್ನ ಅವಿ ಇಲ್ಲೇ ಇದ್ದಾನೆ, ಇನ್ನು ನಾನೇಕೆ ಅಳಲಿ?" ಎನ್ನುತ್ತಾ ಆ ಮಕ್ಕಳನ್ನು ಮತ್ತೊಮ್ಮೆ ಬಿಗಿದಪ್ಪಿದಳು. :)

Friday, October 31, 2008

ಕನ್ನಡ ಈಗ ಶಾಸ್ತ್ರೀಯ ಭಾಷೆಗಳ ಪಟ್ಟಿಗೆ !!!




ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು !!!




ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡಿರುವ ವಿಷಯ ಕೇಂದ್ರ ಸರ್ಕಾರ ಇಂದು ಸಂಜೆ ಪ್ರಕಟಿಸಿದೆ. ಇಲ್ಲಿಯವರೆಗೆ ಸಂಸ್ಕೃತ ಮತ್ತು ತಮಿಳು ಭಾಷೆಗೆ ಸೀಮಿತವಾಗಿದ್ದ ಆ ಗೌರವ, ಈಗ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಲಭಿಸಿದೆ. ಈಗಾಗಲೇ ಕರ್ನಾಟಕದಾದ್ಯಂತ ಸಂಭ್ರಮದ ವಾತಾವರಣ ಶುರುವಾಗಿದೆ. 53ನೇ ರಾಜ್ಯೋತ್ಸವ ಆಚರಿಸುತ್ತಿರುವ ಕನ್ನಡಿಗರಿಗೆ ಹೆಚ್ಚಿನ ಸಂತೋಷವಾಗಿದೆ, ಎಲ್ಲೆಲ್ಲೂ ಹಬ್ಬದ ವಾತಾವರಣ ಕಂಡಿದೆಯಂತೆ.




ಸುದ್ಧಿ ಓದಿ ಬಹಳ ಸಂತಸವಾಯಿತು. ಶಾಸ್ತ್ರೀಯ ಭಾಷೆ ಅಂದ್ರೆ ಏನು ಮತ್ತಿತರ ವಿವರಗಳಿಗೆ ಇಲ್ಲಿ ಮತ್ತು ಇಲ್ಲಿ ನೋಡಿ.




ಹಾಗೆಯೆ ಮನದಲ್ಲಿ ಅನೇಕ ಪ್ರಶ್ನೆಗಳು ಎದ್ದವು... ಇದರಿಂದ ಭಾಷೆಗೆ ಏನು ಪ್ರಯೋಜನ? ಕರ್ನಾಟಕದಲ್ಲಿ ಮರೆಯಾಗುತ್ತಿರುವ ಕನ್ನಡದ ಉಳಿವಿಕೆ ಇದರಿಂದ ಸಾಧ್ಯವೇ? ಇದು ಕೇವಲ ರಾಜಕೀಯ ವ್ಯಕ್ತಿಗಳು ಕೆಲವು ರಾಜ್ಯದ ಜನರನ್ನು ಸಂತೃಪ್ತಿ ಪಡಿಸಲು/ ಓಟ್ ಗಳಿಸಲು ಹೂಡಿದ ತಂತ್ರವೇ?


Monday, October 27, 2008

ಬಣ್ಣ ಬಣ್ಣದ ದೀಪಗಳು !!!

ಗಣೇಶನ ಮಾಡಲು ತಂದಿದ್ದ ಕ್ಲೇ ಇನ್ನೂ ಸ್ವಲ್ಪ ಉಳಿದಿತ್ತು. ಅದರಲ್ಲಿ ದೀಪಾವಳಿಗೆ ದೀಪಗಳನ್ನು ಮಾಡೋಣ ಅಂತ ಪ್ರಯತ್ನಿಸಿದ್ದೆ. ಆದರೆ ಕೆಲಸಕ್ಕೆ ಹೊರಡುವ ಆತುರದಲ್ಲಿ ಹೊರಗೆ ಒಣಗಲು ಇಟ್ಟಿದ್ದ ದೀಪಗಳನ್ನು ಅಲ್ಲೇ ಬಿಟ್ಟು, ಅವು ಮಳೆಗೆ ನೆಂದು ತೊಪ್ಪೆಯಾದವು :( ಕೊನೆಗೆ ಎಂದಿನಂತೆ Tealight Candlesನ ಹಚ್ಚಿ ಹಬ್ಬ ಮಾಡೋಣ ಅಂತ ಸುಮ್ಮನಾದೆ.
ಆರ್ಕುಟ್’ನಲ್ಲಿ ನನ್ನ ಕೆಲವು ಗೆಳತಿಯರು ಮಾಡಿದ ಈ ಸುಂದರ ದೀಪಗಳನ್ನು ನೋಡಿ.


ಪೆನ್ಸಿಲ್ ಸ್ಕೆಚ್ ಪ್ರವೀಣೆ ಉಮಾ ಅವರ ಕೈಯಲ್ಲಿ ಮೂಡಿದ ಸುಂದರ ಬಣ್ಣಬಣ್ಣದ ಪ್ಲೇ ಡೋ ದೀಪಗಳು.

Sunday, October 26, 2008

ದೀಪಾವಳಿ ಹಾಡುಗಳು !!!

ಸಂಜೆ ದೀಪ ಹಚ್ಚುವಾಗ ಅಮ್ಮ ಹೇಳ್ತಾಯಿದ್ದ ’ರಂಜನಿ’ ರಾಗದಲ್ಲಿರುವ ಈ ಹಾಡು ನನಗೆ ಬಹಳ ಇಷ್ಟ.
ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ
ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ//ಪ//
ಶುಕ್ರವಾರದಲ್ಲಿ ನಿನ್ನ/ ಕೀರ್ತನೆಯಗೈವೆ
ಭಕ್ತಿಯಿಂದ ಬೇಡುವೆ ಮುಕ್ತಿ ಸಂಪದವ ನೀಡೆ //ದೀಪ//



ನಿನ್ನನ್ನೆ ಪಾಡುವೆ ನಿನ್ನನ್ನೆ ಪೊಗಳುವೆ
ನಿನ್ನ ಚರಣ್ದಲ್ಲಿ ಶಿರವನಿಟ್ಟು ನಾ ನಮಿಸುವೆ//೨//
ನಿನ್ನ ಕೃಪೆ ಕಟಾಕ್ಷವು ನನ್ನದಾಗಿ ಬೆಳಗುತಿರಲಿ//ದೀಪ//



ಅಜ್ಞಾನದ ಕತ್ತಲಲ್ಲಿ ಬಳಲಿ ಬೆಂಡಾಗಿಹೆನು
ಸುಜ್ಞಾನದ ಬೆಳಕು ನೀಡಿ ಜೀವನ ಹಸನಾಗಿಸು//೨//
ಅಭಯವ ನೀಡು ಬಾ/ ಕರುಣೆಯ ತೋರು ಬಾ
ಮನಸು/ ನಿನ್ನಲ್ಲಿ/ ನಿಲ್ಲಿಸು/ ತಾಯೇ //ದೀಪ//

ನಮ್ಮ ಕನ್ನಡ ಚಲನಚಿತ್ರಗಳಲ್ಲಿ ಕೆಲವು ದೀಪಾವಳಿ ಹಾಡುಗಳಿವೆ. ಅವುಗಳಲ್ಲಿ ಡಾ. ರಾಜ್ ಮತ್ತು ಹರಿಣಿ ಅಭಿನಯದ "ನಂದಾ ದೀಪ" ಚಿತ್ರದಲ್ಲಿರುವ "ನಾಡಿನಂದಾ ಈ ದೀಪಾವಳಿ ಬಂತು.. ...." ಹಾಡು ನನಗೆ ಬಹಳ ಇಷ್ಟ. ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಿದರೂ ಈ ಹಾಡು ನನಗೆ ಸಿಗಲಿಲ್ಲ. ನಿಮ್ಮಲ್ಲಿ ಇದ್ದರೆ ನನಗೆ ದಯವಿಟ್ಟು ಈ-ಮೇಲ್ ಮಾಡಿ.

೨೦೦೩ರಲ್ಲಿ ಬಿಡುಗಡೆಯಾದ ’ನಂಜುಂಡಿ’ ಚಲನಚಿತ್ರದಲ್ಲಿರುವ ಈ ಅರ್ಥಪೂರ್ಣ ಹಾಡು ನೋಡಿ . ಸಾಹಿತ್ಯ ಮತ್ತು ಸಂಗೀತ ಹಂಸಲೇಖ ಅವರಿಂದ. ಹಾಡಿರುವವರು ಮಧು ಬಾಲಕೃಷ್ಣ ಮತ್ತು ನಂದಿತ್.

ದೀಪದಿಂದ ದೀಪವ

ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಮನಸಿನಿಂದ ಮನಸನು

ಬೆಳಗಬೇಕು ಮಾನವ

ಮೇಲು ಕೀಳು ಭೇದ ನಿಲ್ಲಲು

ಭೇದವಿಲ್ಲ ಬೆಂಕಿಗೆ

ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ ಪ

ಆಸೆ ಹಿಂದೆ ದುಃಖವೆಂದರು

ರಾತ್ರಿ ಹಿಂದೆ ಹಗಲು ಎಂದರು

ದ್ವೇಷವೆಂದು ಹೊರೆ ಎಂದರು

ಹಬ್ಬವದಕೆ ಹೆಗಲು ಎಂದರು

ಎರಡು ಮುಖದ

ನಮ್ಮ ಜನುಮದ ವೇಷಾವಳಿತಿಳಿದು

ಹಾಲ್ಬೆಳಕ ಕುಡಿವುದೇ ದೀಪಾವಳಿ ೧

ಮಣ್ಣಿನಿಂದ ಹಣತೆಯಾದರೆ

ಬೀಜದಿಂದ ಎಣ್ಣೆಯಾಯಿತು

ಅರಳೆಯಿಂದ ಬತ್ತಿಯಾದರೆ

ಸುಡುವ ಬೆಂಕಿ ಜ್ಯೋತಿಯಾಯಿತು

ನಂದಿಸುವುದು ತುಂಬ ಸುಲಭವೋ

ಹೇ ಮಾನವ

ಆನಂದಿಸುವುದು ತುಂಬ ಕಠಿಣವೋ

ಹೇ ದಾನವ೨

ದೀಪಾವಳಿ ಹಬ್ಬದ ಶುಭಾಶಯಗಳು !!!

ಬಂದಿದೆ ಬೆಳಕಿನ ಹಬ್ಬ ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಹಾವಳಿ !!

ಶುಭವ ತರಲಿ ಈ ದೀಪಾವಳಿ
ನಮ್ಮನಿಮ್ಮೆಲ್ಲರ ಬಾಳಿನಲಿ !!!

ದೀಪಾವಳಿ ಬೆಳಕಿನ ಹಬ್ಬ, ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಹಬ್ಬ, ಅಜ್ಞಾನದಿಂದ ಸುಜ್ಞಾನದತ್ತ ಕರೆದೊಯ್ಯುವ ಹಬ್ಬ, ಅಂಧಕಾರ ಕಳೆಯುವ, ಪ್ರೀತಿ-ವಿಶ್ವಾಸದ ಹಬ್ಬ ದೀಪಾವಳಿ.

ದೀಪಾವಳಿ ಅಂದೊಡನೆ ಮನಸಿಗೆ ಬರುವುದು ಸಾಲುಸಾಲು ದೀಪಗಳು, ಢಂ ಢಂ ಪಟಾಕಿಗಳು, ಬಣ್ಣ ಬಣ್ಣದ ರಂಗೋಲಿ, ಬಗೆಬಗೆಯ ಸಿಹಿ ತಿಂಡಿಗಳು. ಹೊಸ ಬಟ್ಟೆ ಹಾಕಿಕೊಂಡು, ಅಣ್ಣ ತಮ್ಮಂದಿರ ಜೊತೆ ಪೈಪೋಟಿಯ ಮೇಲೆ ಪಟಾಕಿ ಹಚ್ಚೋದು.. ಅದರಲ್ಲೂ ಬೆಳಗ್ಗೆ ಎಲ್ಲರಿಗಿಂತಾ ಮೊದಲು ನಾನೇ ಪಾಟಾಕಿ ಸಿಡಿಸಬೇಕೆಂದು ಬೇಗ ಎದ್ದು, ಸ್ನಾನ ಮುಗಿಸಿ, ಅಮ್ಮ "ಇಷ್ಟು ಬೇಗ ಪಟಾಕಿ ಸಿಡಿಸಿ ಗಲಾಟೆ ಮಾಡಬೇಡ" ಎಂದರೂ ಕೇಳದೇ "ಇರಲಿ ಬಿಡಮ್ಮ ಮಲಗಿರೋರಿಗೆ ಅಲರಾಮ್ ಆಗುತ್ತೆ" ಅಂತ ಹೇಳಿ ರೋಡಿಗೆ ಓಡ್ತಾಯಿದ್ದೆ :D

ಹಬ್ಬದ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.

Thursday, September 25, 2008

ನಾಮಕರಣ ವಿಧಾನದ ಹಿನ್ನಲೆ !!!

ಮಗುವಿಗೆ ಹೆಸರಿಡುವ ಹಬ್ಬವೇ ನಾಮಕರಣ. ವ್ಯವಹಾರ ನಾಮದ ಜೊತೆಗೆ ಕೆಲವರು ಐದು ಹೆಸರುಗಳನ್ನು ಇಡುತ್ತಾರೆ. ಮಗುವಿನ ರಕ್ಷಣೆಯ ದೃಷ್ಟಿಯಿಂದ ದೇವರ ಹೆಸರು, ಹಿರಿಯರ ನೆನಪಿಗಾಗಿ ಒಂದು, ನಕ್ಷತ್ರನಾಮ, ಮಾಸ ನಾಮ ಇತ್ಯಾದಿ... ಗಂಡು ಮಗುವಿಗೆ ಆದರೆ ೨,೪,೬ ಅಕ್ಷರಗಳ(even number) ಹೆಣ್ಣು ಮಗುವಿಗೆ ೩,೫,೭ (odd number) ಅಕ್ಷರಗಳ ಹೆಸರು ಇಡಬೇಕಂತೆ. ತಂದೆಯು ತನ್ನ ಬೆರಳುಂಗುರದಿಂದ ಅಕ್ಕಿಯ ಮೇಲೆ ಮಗುವಿನ ಹೆಸರು ಬರೆದು, ನಂತರ ಮಗುವಿನ ಕಿವಿಯಲ್ಲಿ ಹೆಸರು ಹೇಳಿ, ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುತ್ತಾರೆ. ಈ ಎಲ್ಲದರ ಹಿಂದಿನ ಕಾರಣವೇನಿರ ಬಹುದು ಅಂತಾ ಯೋಚಿಸಿದಾಗ ನನಗೆ ಅನಿಸಿದ್ದು ಇವು. ಈ ಕಾರಣಗಳು ಸರಿಯಿಲ್ಲದಿರಲೂ ಬಹುದು, ನಿಮಗೆ ಹೆಚ್ಚಿನ ಮಾಹಿತಿಯಿದ್ದರೆ ಹಂಚಿಕೊಳ್ಳಿ.

ಹೆಸರು ಬರೆಯಲು ತಂದೆಯು ತನ್ನ ಉಂಗುರವನ್ನೇ ಏಕೆ ಬಳಸುತ್ತಾನೆ?
ಚಿನ್ನಕ್ಕೆ ಲೋಪವಿಲ್ಲ, ಅದು ಶ್ರೇಷ್ಠವಾದದ್ದು. ಹೆಸರಿಡುವ ಕೆಲಸ ತಂದೆಯದ್ದಾದ್ದರಿಂದ ಅವನು ತೊಡುವ ಒಡವೆಗಳಲ್ಲಿ ಉಂಗುರ ಬಹಳ ಸುಲುಭವಾಗಿ ತೆಗೆದು ಹಾಕಬಹುದು. ಅಲ್ಲದೆ ಬೇರೆ ಆಭರಗಳಿಗೆ ಹೋಲಿಸಿದರೆ ಉಂಗುರದಲ್ಲಿ ಬರೆಯುವುದು ಸುಲಭ. ಜೊತೆಗೆ ರೋಮನ್ನರ ನಂಬೆಕೆಯಂತೆ ನಮ್ಮ ಎಡಗೈಯ ೪ನೇ ಬೆರಳಿನಿಂದ ಶುರುವಾಗುವ ರಕ್ತನಾಳವೊಂದು ನೇರ ಹೃದಯ ಸೇರುತ್ತದಂತೆ. ಮಗುವಿನ ಹೆಸರನ್ನು ಬರೆಯಲು ತಂದೆಯು ತನ್ನ ಹೃದಯಕ್ಕೆ ಹತ್ತಿರವಿರುವ ಬೆರಳಿನ ಉಂಗುರವನ್ನು ಬಳಸಿ ಮಗುವಿಗೆ "ನೀನು ನನಗೆ ಬಹಳ ಪ್ರೀತಿಪಾತ್ರನಾದವಳು/ನು" ಅಂತ ಹೇಳುವಂತಿದೆ.


ಅಕ್ಕಿಯ ಮೇಲೆ ಮಗುವಿನ ಹೆಸರು ಬರೆಯಲು ಕಾರಣವೇನು?
ಅಕ್ಕಿಯ ಮೆಲೆ ಬರೆದ ಹೆಸರು ತಟ್ಟೆ ಸ್ವಲ್ಪ ಅಲುಗಾಡಿದರೆ ಅಳಿಸುವುದು, ಹಾಗೆಯೇ ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಮಗುವಿಗೆ ತಿಳಿಸಲು.


ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುವುದು ಏಕೆ?
  • ಜೇನಿನಷ್ಟೇ ಸಿಹಿಯಾದ ಹೆಸರನ್ನು ನಿನಗೆ ಇಡುತ್ತಿರುವೆವು ಕಂದ ಅಂತ ತಿಳಿಸಲು.
  • ಮಗುವಿನ ಬಾಳು ಜೇನಿನಂತೆ ಸಿಹಿಯಾಗಿರಲೆಂದು ಹಾರೈಸಲು.
  • ಮಗುವು ತನ್ನ ನಡೆ-ನುಡಿಗಳನ್ನು ಜೇನಿನಂತೆ ಸಿಹಿಯಾಗಿ ಬೆಳಸಿಕೊಳ್ಳಲಿಯೆಂದು.
  • ಸಿಹಿಯಾದ್ದರಿಂದ ಮಗುವು ಯಾವುದೇ ರಗಳೆಯಿಲ್ಲದೆ ಜೇನು ಚೀಪುತ್ತದೆ ಎಂದು.

ನನ್ನ ಮಗಳ ನಾಮಕರಣವೂ ಹೀಗೇ ಮಾಡಿದೆವು. ಜೇನಿನಲ್ಲಿ "Clostridium Botulimun" ಎಂಬ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಅವಳಿಗೆ ಜೇನಿನ ಬದಲಿಗೆ ಹಾಲು ಚೀಪಿಸಿದೆವು:)

Thursday, September 11, 2008

ಅದೃಷ್ಟದಾಟ !!!

ಸೆಪ್ಟೆಂಬರ್ ೬ ೨೦೦೮, ಶನಿವಾರ ಸಂಜೆ ಫ್ಲೋರಿಡಾದ ಪಾನ್ಸ್ ಇನ್-ಲೆಟ್ ಎಂಬಲ್ಲಿ ಈಜಲು ಹೋದ ಅಪ್ಪ ಮಗ, ನೀರಿನ ಅಲೆಗಳಿಗೆ ಸಿಕ್ಕಿ ಬಿದ್ದು, ಶಾರ್ಕ್-ಗಳು ತುಂಬಿರುವ ಅಟ್ಲಾಂಟಿಕ್ ಸಮುದ್ರದಲ್ಲಿ ಸತತ ಹದಿನೈದು ಘಂಟೆಗಳ ಕಾಲ ಯಾವುದೇ ಲೈಫ್ ಜಾಕೆಟ್ ಇಲ್ಲದೇ ತೇಲುತ್ತಾಯಿದ್ದು ಬದುಕಿ ಉಳಿದ ನ್ಯೂಸ್ ಓದಿ ಆಶ್ಚರ್ಯ ಆನಂದ ಎರಡೂ ಒಟ್ಟಿಗೆ ಆಯಿತು.


೧೨ ವರ್ಷದ ಮೂಕ ಬಾಲಕ ಕ್ರಿಸ್ ಅಲೆಗಳಲ್ಲಿ ಸಿಕ್ಕಿದ್ದನ್ನು ನೋಡಿ, ಅವನನ್ನು ರಕ್ಷಿಸಲು ಹೋದ ಅವನಪ್ಪ ಕೂಡ ಅಲೆಗಲಿಗೆ ಸಿಕ್ಕಿ ಬಿದ್ದ. ಮಗನನ್ನು ಎಚ್ಚರದಿಂದ ಇಡಲು ಅಪ್ಪ, ಮಗನ ಅಚ್ಚುಮೆಚ್ಚಿನ ಡಿಸ್ನಿ ಚಲನಚಿತ್ರ "Toy Story"ಯಲ್ಲಿ Buzz Lightyearನ ‘To infinity ... and beyond’ ಎಂಬ ಡಯಲಾಗನ್ನು ರಾತ್ರಿ ಬಹಳ ಹೊತ್ತು ಮಗನಿಗೆ ಕೇಳುವಂತೆ ಹೇಳುತ್ತಾಯಿದ್ದು, ಸ್ವಲ್ಪ ಸಮಯದ ನಂತರ ಮಗನ ಧ್ವನಿ ಕೇಳದೇ ತನ್ನ ಮಗ ಇನ್ನಿಲ್ಲ ಅಂತ ಅನ್ನಿಸಿ ಹತಾಶನಾದನು. ಆದರೂ ಮಗಳನ್ನು ನೆನೆದು ತಾನು ಧೈರ್ಯಗೆಡದೇ ರಾತ್ರಿಯಿಡೀ ಎಚ್ಚರವಿದ್ದನು. ಹೆಚ್ಚಿನ ವಿವರಗಳು ಇಲ್ಲಿದೆ. ಅದರ ವಿಡಿಯೋ ನೋಡಿರಿ. ರಾತ್ರಿಯಿಡೀ ಸಮುದ್ರದಲ್ಲಿ ತೇಲುತ್ತಿದ್ದ ಹನ್ನೆರಡರ ಹರೆಯದ ಆ ಮೂಕ ಬಾಲಕನ ಧೈರ್ಯ, ಸ್ಥೈರ್ಯ ಮೆಚ್ಚಬೇಕಾದ್ದೇ. ಅವನಿಗೆ ನನ್ನ ಹಾಟ್ಸ್ ಆಫ್ !!!

ಈ ವಿಸ್ಮಯ ಓದುತ್ತಿದ್ದಂತೆಯೇ, ನಮ್ಮ ಗೆಳೆಯನಿಗೂ ಇದೇ ತರಹ ಅದೃಷ್ಟವಿರಬಾರದಿತ್ತೇ, ಆ ದಿನವೂ ಇಂತಹದೊಂದು ಚಮತ್ಕಾರ ನೆಡೆಯಬಾರದಿತ್ತೆ ಅನ್ನಿಸಿತು. ಬೇಡ ಬೇಡವೆಂದರೂ ಮನಸ್ಸು ಕಳೆದ ವರ್ಷಕ್ಕೆ ಓಡಿತು. ಇದೇ ಸೆಪ್ಟೆಂಬರ್ ತಿಂಗಳ ೨೩ನೇ ತಾರೀಖು ನಾವು ಮೂವರು ಸ್ನೇಹಿತರು ತಮ್ಮ ಮನೆಯವರೊಂದಿಗೆ ಫ್ಲೋರಿಡಾದ ಸೆಂಟ್ ಜಾರ್ಜ್ ದ್ವೀಪಕ್ಕೆ ವಿಹಾರಕ್ಕೆಂದು ಹೋಗಿದ್ದೆವು. ಸ್ನೇಹಿತ ಅನ್ಜುಂ ಈಜಲು ಸಾಗರಕ್ಕೆ ಹೊರಟರು. ಮಿಕ್ಕವರೆಲ್ಲ ಬರೀ ಈಜುಕೊಳದಲ್ಲಿ ಈಜುವವರೆ, ಹಾಗಾಗಿ ಎಲ್ಲರೂ ದಡದಲ್ಲೇ ಮಕ್ಕಳೊಂದಿಗೆ ಉಳಿದೆವು. ಆದರೆ ಕೆಲ ನಿಮಿಷಗಳಲ್ಲೇ ಅನ್ಜುಂ ಅವರು ಅಲೆಗಳ ರಭಸಕ್ಕೆ ಸಿಕ್ಕಿ ಈಜಲು ಯತ್ನಿಸುತ್ತಿದ್ದದ್ದು ಗಮನಿಸಿದೆವು. "ಸಹಾಯ ಮಾಡಿ" ಎಂದು ಬೊಬ್ಬೆಇಟ್ಟೆವು ಆದರೆ ಹತ್ತಿರದಲ್ಲಿದ್ದ ಯಾರಿಗೂ ಈಜು ಬರುತ್ತಿರಲಿಲ್ಲ. ಬೀಚ್-ನ ಗಾರ್ಡ್-ಗಳು ಬರುವಷ್ಟರಲ್ಲಿ ನಮ್ಮ ಸ್ನೇಹಿತ ಈಜುವುದನ್ನು ನಿಲ್ಲಿಸಿ ತೇಲುತ್ತಿದ್ದರು. ಅವರನ್ನು ದಡಕ್ಕೆ ಎಳೆದು ತಂದಾಗಲೇ ಜೀವವಿಲ್ಲವೆಂದು ನನಗೆ ಗೊತ್ತಾಗಿ ಹೋಯಿತು, ಕಣ್ಣ್ ಸನ್ನೆಯಲ್ಲೇ ನನ್ನವರಿಗೆ ವಿಚಾರ ತಿಳಿಸಿ ೭ ತಿಂಗಳ ಗರ್ಭಿಣಿಯಾಗಿದ್ದ ನಾನು ಆಗ ಆದ ಶಾಕ್-ನಿಂದ ಸುಧಾರಿಸಿಕೊಳ್ಳಲು ಹಿಂದೆ ಸರಿದು ಮಕ್ಕಳ ಜೊತೆ ಕುಳಿತೆ. ವೈದ್ಯ ವೃತ್ತಿಯಲ್ಲಿ ಎಷ್ಟೋ ಸಾವುಗಳನ್ನು ಕಂಡಿದ್ದೂ, ಹಲವಾರು ಮೃತರ ಮನೆಯವರಿಗೆ ವಿಷಯ ನಾನೆ ತಿಳಿಸಿದ್ದರೂ, ಪ್ಯಾರಾಮೆಡಿಕ್ ನವರು Resuscitation ಕೊನೆ ಪ್ರಯತ್ನ ಮಾಡುತ್ತಿರುವಾಗ ಸ್ನೇಹಿತನ ಪತ್ನಿ ನನ್ನ ಬಳಿ ಬಂದು "ಏನ್ ಆಗುತ್ತೆ?ನನ್ನ ಅನ್ಜುಂ ನನಗೆ ಸಿಗುತ್ತಾರಲ್ಲವಾ?" ಅಂತೆಲ್ಲಾ ಕೇಳಿದಾಗ ಧೈರ್ಯಗೆಡಬೇಡಿ ಅಂತ ಹೇಳಲಷ್ಟೆ ನನ್ನಿಂದ ಸಾಧ್ಯವಾಗಿದ್ದು. ನಮ್ಮೆಲ್ಲರ ಕಣ್ಣೆದುರಿನಲ್ಲೇ ಗೆಳೆಯ ಇನ್ನಿಲ್ಲವಾದರು. ಸ್ನೇಹಿತನ ಪತ್ನಿ ಮತ್ತು ೫ ವರ್ಷದ ಅವರ ಮಗಳನ್ನು ಸಾಂತ್ವಾನ ಮಾಡುತ್ತಾ ಮನೆಗೆ ಬಂದೆವು.

ಆಹ್, ನನ್ನಿಂದ ಏನೂ ಮಾಡಲಾಗಲಿಲ್ಲವಲ್ಲ ಅನ್ನೊ ನೋವು ಇಂದಿಗೂ ನನ್ನನ್ನು ಕಾಡುತ್ತದೆ.

Tuesday, September 9, 2008

ಅಲ್ಲಿ ನೋಡು ಗಣಪ ಇಲ್ಲಿ ನೋಡು ಗಣಪ

ಅಲ್ಲಿ ನೋಡು ಗಣಪ
ಇಲ್ಲಿ ನೋಡು ಗಣಪ
ಮೇಲೆ ನೋಡು ಗಣಪ
ಕೆಳಗೆ ನೋಡು ಗಣಪ

ಈ ಹಾಡು ನಾವು ಗಣೇಶನ ವಿಸರ್ಜನೆಗೆ ಹೋಗೋವಾಗ ಹಾಡ್ತಾಯಿದ್ವಿ. ಅಮೇರಿಕಾದಲ್ಲಿರುವ ನನ್ನ ಹಲವಾರು ಸ್ನೇಹಿತೆಯರು ಹಬ್ಬಕ್ಕೆ ತಾವೇ ಮಣ್ಣಿನಿಂದ, ಗೋಧಿಹಿಟ್ಟಿನಿಂದ, ಅರಿಶಿನದ ಗಣಪತಿಯನ್ನ ಮಾಡಿ ಪೂಜಿಸಿದ್ದರು, ಅವರು ಫೋಟೋಗಳನ್ನ ನನ್ನೊಂದಿಗೆ ಹಂಚಿಕೊಂಡರು. ಬನ್ನಿ ಅವರೆಲ್ಲರ ಮನೆ ಗಣೇಶ ದರ್ಶನ ಮಾಡಿ ಬರೋಣ.

ನಮ್ಮ ತಾಯಿ ಬೆಂಗಳೂರಿನಲ್ಲಿ ಹಬ್ಬದ ದಿನ ನನ್ನ ಗಣಪನ ಕಲೆಕ್ಶನ್ ನಲ್ಲಿ ಕೆಲವನ್ನು ಹೊರ ತೆಗೆದು ಜೋಡಿಸಿದ್ದರು.



ಶಿಕಾಗೋದಲ್ಲಿರುವ ಆತ್ಮೀಯ ಗೆಳತಿ ರೋಹಿಣಿ ಪ್ಲೇ ಡೋನಿಂದ ಗಣಪತಿಯನ್ನು ಮಾಡಿದ್ದು ಹೀಗೆ.



ಇವರು ೨೦೦೬ರಲ್ಲಿ ಮಾಡಿದ್ದ ವಿನಾಯಕನ ಮೂರ್ತಿ.


ಗೋಧಿ ಹಿಟ್ಟಿನಲ್ಲಿ ಮಾಡಿದ ಗಜಾನನ.



ಅರಿಶಿನದ ವಿನಾಯಕ.



ಮೈದಾ ಹಿಟ್ಟಿನ ಲಂಬೋದರ.




ಬ್ಲ್ಯಾಕ್ ಕ್ಲೇನಲ್ಲಿ ಮೂಡಿದ ವಿಘ್ನೇಶ್ವರ.


ಗಜಮುಖ


ಮಹೇಶ್ವರ ಪುತ್ರ


ಹೂವಿನ ರಂಗವಲ್ಲಿಯಲ್ಲಿ ಗಣಪ


ಸಿದ್ದಿವಿನಾಯಕನ ರಂಗೋಲಿ


ಮೂಶಿಕವಾಹನ



ಕಳೆದ ವಾರ ಗಣೇಶ ಹಬ್ಬದ ಸ್ಪೆಶಲ್ ಅನ್ನುವಂತೆ ಹಲವಾರು ಬ್ಲಾಗ್-ಗಳಲ್ಲಿ ಗಣಪನದ್ದೇ ವಿಷಯ.

ಕೇಕ್ ರಾಣಿ ಎಂದೇ ಸ್ನೇಹಿತರಲ್ಲಿ ಚಿರಪರಿಚಿತಳಾದ ಅಟ್ಲಾಂಟದಲ್ಲಿರುವ ನಮ್ರತಾ ಪ್ಲೇ ಡೊನಿಂದ ಮಾಡಿದ ಗೌರಿ-ಗಣೇಶ ಇಲ್ಲಿದೆ. ಬಾಯಲ್ಲಿ ನೀರೂರಿಸುವ ತಿಂಡಿಗಳನ್ನ ನೋಡ್ತಾ ಅಲ್ಲೇ ಇರ್ಬೇಡಿ, ವಾಪಸ್ ಇಲ್ಲಿಗೆ ಬನ್ನಿ ಇನ್ನೂ ಹಲವಾರು ಗಣೇಶಗಳಿವೆ ನೋಡೋಕೆ:)

ಮೊವಂಜ, ತಾಂಜನಿಯ,ಪೂರ್ವ ಆಫ್ರಿಕದಲ್ಲಿರುವ ಅಹರ್ನಿಶಿ ಶ್ರೀಧರ್ ಅವರು ನೂರಿಪ್ಪತ್ತಕ್ಕೂ ಹೆಚ್ಚು ಜನ ಸ್ನೇಹಿತರೊಡನೆ ಹಬ್ಬ ಆಚರಿಸಿದ್ದು ಹೀಗೆ.

ಆರ್ಕುಟ್ ನಲ್ಲಿರುವ Mrs South Indies ಎಂಬ ಬಳಗದ ಸದಸ್ಯೆಯರು ಹಬ್ಬ ಆಚರಿಸಿದ್ದು ಹೀಗೆ.

ಅಪ್ಪಟ ಹುಟ್ಟು ಮೈಸೂರು ಕನ್ನಡಿಗ ಎಂದು ಹೇಳಿಕೊಳ್ಳುವ ಶಂಕರ ಪ್ರಸಾದ ಅವರು ತಮ್ಮ ಸೋಮಾರಿ ಕಟ್ಟೇಲಿ ಗಣಪನ ಕೂರ್ಸಿದ್ದು ಹೀಗೆ:)


ಐರ್ ಲ್ಯಾಂಡಿನಲ್ಲಿರೋ ಕನ್ನಡಿಗರು ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಿದರು. ಹಬ್ಬದ ಫೋಟೋಗಳು ಇಲ್ಲಿವೆ.


Ganesha Outsourced! ಶಿಕಾಗೋದಲ್ಲಿನ ನಮ್ಮ ಸಾಫ್ಟ್ ವೇರ್ ಇಂಜಿನೀಯರ್ ಸಾಹೇಬ್ರು ಚೀನಾದವರು ಮಾಡಿದ ಗಣಪನ ತಂದು ಪೂಜೆ ಮಾಡಿದ್ರು.


ಶುಭಾ ಅವರು ಚಿಕ್ಕಂದಿನ ದಿನಗಳ ಹಬ್ಬ ನೆನೆಯುತ್ತಾ ಬರೆದದ್ದು Gowri Ganesha..... and memories of 'GANPATI KOODSIDDIRA?


ಶ್ರೀ ಅವರು ತಮ್ಮ ಬ್ಲಾಗಿನಲ್ಲಿ ಗಣೇಶಹಬ್ಬದ ಆಚರಣೆಯ ಬಗ್ಗೆ ಪೂರ್ತಿ ವಿವರ ಕೊಟ್ಟಿದ್ದಾರೆ.


ಗಣೇಶ ಹಬ್ಬದ ಬಗ್ಗೆ ದಟ್ಸ್ ಕನ್ನಡದಲ್ಲಿ ಹಲವಾರು ಲೇಖನಗಳು ಮೂಡಿ ಬಂದಿವೆ. ಓದಿರಿ

Update : Part of this post has been posted here at Alaivani

Wednesday, September 3, 2008

ಗಣೇಶ ಹಬ್ಬದ ಶುಭಾಶಯಗಳು!!!

ಇಂದು ವಿನಾಯಕ ಚತುರ್ಥಿ. ಬೆಂಗಳೂರಿನಲ್ಲಿದ್ದಾಗ ಗೌರೀ ಗಣೇಶ ಹಬ್ಬಗಳು ಬಂದರೆ ಎಲ್ಲೆಲ್ಲಿದ ಸಂಭ್ರಮ. ರಸ್ತೆಗಳ ತುಂಬಾ ವಿವಿಧ ಎತ್ತರ, ಬಣ್ಣದ ಗಣೇಶನ ಮಣ್ಣಿನ ಮೂರ್ತಿಗಳ ಸಾಲುಸಾಲು ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಅಲ್ಲದೇ ಮಾರುಕಟ್ಟೆಯ ತುಂಬಾ ಹಬ್ಬಕ್ಕೆ ಬೇಕಾಗುವ ಹೂವು ಪತ್ರೆಗಳು, ಹಣ್ಣುಗಳು, ಗರಿಕೆ ಹುಲ್ಲು, ಮಾವಿನ ಸೊಪ್ಪು-ಬಾಳೆ ಕಂದು, ಅಲಂಕಾರಕ್ಕೆ ಬಣ್ಣಬಣ್ಣದ ಕಾಗದಗಳು.

ಚಿಕ್ಕಂದಿನಿಂದಲೂ ಗಣಪ ನನ್ನ ಜೀವನದಲ್ಲಿ ವಿಶೇಷ ರೀತಿಯಲ್ಲಿ ಹಾಸುಹೊಕ್ಕಿಬಿಟ್ಟಿದ್ದಾನೆ. ಬೆಳಗ್ಗೆ ಸ್ನಾನ ಮುಗಿಸಿ ಹೊಸ ಬಟ್ಟೆ ಹಾಕಿಕೊಂಡು, ಅಪ್ಪನ ಜೊತೆ ನಾವ್ ಮೂರೂ ಜನ ಹೋಗ್ಬೇಕು ಅಂಗಡಿಗೆ ಗಣೇಶನ ಸೆಲೆಕ್ಟ್ ಮಾಡೋಕೆ. ಮನೆಗೆ ಬಂದು ಪೂಜೆ ಮುಗಿಸಿ, ಮದ್ಯಾಹ್ನ ಭರ್ಜರಿ ಊಟವಾದ ನಂತರ ದೊಡ್ಡ ಬಟ್ಟಲಿನಲ್ಲಿ ಅಕ್ಷತೆ ತುಂಬಿಕೊಂಡು ಗೆಳೆಯರೊಂದಿಗೆ ಮನೆ ಮನೆಗೆ ಹೋಗಿ "ಗಣೇಶ ಕೂರ್ಸಿದ್ದೀರಾ?" ಅಂತಾ ಕೇಳ್ತಾ ಅವರ ಮನೆಗಳಿಗೆ ಹೋಗಿ ವಿನಾಯಾಕನಿಗೆ ನಮಸ್ಕಾರ ಮಾಡಿ, ಅವರು ಕೊಟ್ಟ ತಿಂಡಿ ತಿಂದು ಮುಂದಿನ ಮನೆಗೆ ಹೋಗ್ತಾಯಿದ್ವಿ. ನೂರಾಎಂಟು ಮನೆಗಳಿಗೆ ಹೋಗಿ ವಿವಿಧ ಬಣ್ಣ, ಎತ್ತರದ, ಗಣಪತಿಯನ್ನ ನೋಡಿ ಬರ್ತಾಯಿದ್ವಿ. ಕೊನೆಕೊನೆಗೆ ಕೊಟ್ಟ ತಿಂಡಿ ತಿನ್ನಲಾರದೆ ಕವರಿನಲ್ಲಿ ತುಂಬಿಕೊಂಡು ಮನೆಗೆ ಬರ್ತಾಯಿದ್ದದ್ದು ಉಂಟು.

ಆಮೇಲೆ ಸ್ವಲ್ಪ ವರ್ಷ ಅಣ್ಣ-ತಮ್ಮ ಮತ್ತಿತರ ನೆರೆಮನೆ ಹುಡುಗರೊಂದಿಗೆ ಸೇರಿ ಬೀದಿಯಲ್ಲಿ ಗಣಪತಿ ಕೂರಿಸ್ತೀವಿ ಎಂದು ಮನೆ ಮನೆಗೆ ಹೋಗಿ ಚಂದಾ ಎತ್ತುತ್ತಿದ್ದೆವು. ಹಬ್ಬಕ್ಕೆ ತಿಂಗಳು ಇರುವಾಗಲೇ ಡ್ಯಾನ್ಸ್, ಡ್ರಾಮಾ ಇತ್ಯಾದಿ ಸಾಂಸ್ಕೃತಿಕ ಕಾರಯಕ್ರಮಗಳ ತಾಯಾರಿ ಶುರುವಾಗುತ್ತಿತ್ತು. ಹಬ್ಬದ ದಿನ "ಅಮ್ಮ ಬೇಗ ಪೂಜೆ ಮುಗಿಸಮ್ಮ , ನಮ್ಮ್ ಗಣೇಶ ಕಾಯ್ತಿದ್ದಾನೆ" ಅಂತ ಬೀದಿಗೆ ಓಡುತ್ತಿದ್ವಿ. ಸಂಜೆ ಎಲ್ಲಾ ಸಾಂಸ್ಕೃತಿಕ ಕಾರಯಕ್ರಮಗಳು ಮುಗಿದು ಮಹಾಮಂಗಳಾರತಿ ಆದ್ಮೇಲೆ ನಾಲ್ಕಾರು ಬೀದಿಯಲ್ಲಿ ನಮ್ಮ್ ಗಣಪನ ಮೆರವಣಿಗೆ ಮಾಡುತ್ತಾ..
"ಗಣೇಶ ಬಂದ
ಕಾಯ್ ಕಡ್ಬು ತಿಂದ
ಹೊಟ್ಟೆ ಮೇಲೆ ಗಂಧ
ಚಿಕ್ಕ್ ಕೆರೇಲ್ ಬಿದ್ದ
ದೊಡ್ಡ್ ಕೆರೇಲ್ ಎದ್ದ "
ಅಂತಾ ಹಾಡಿ ಕುಣಿದಾಡಿ, ಕೊನೆಗೆ ಮತ್ತೆ ಮುಂದಿನ ವರ್ಷ ಬಾರಯ್ಯ ಪ್ರಭುವೇ ಅಂತ ವಿಸರ್ಜನೆ ಮಾಡಿ ಮನೆ ಬರ್ತಾಯಿದ್ದದ್ದು. ಛೆ, ಆಗೆಲ್ಲಾ ನಮ್ಮ್ ಮನೇಲಿ ಕ್ಯಾಮೆರಾ ಇರಲಿಲ್ಲ, ಆ ಎಲ್ಲಾ ಸವಿ ನೆನಪುಗಳು ಮನಸಿನಲ್ಲಿದೆ ಅಷ್ಟೆ.

ನಾವು ಮನೆ ಬದಲಾಯಿಸಿದ ನಂತರ ಇದೆಲ್ಲಾ ನಿಂತು ಹೋಯಿತು. ಆಗ ಶುರುವಾಯಿತು "ಗಣಪನ ವಿಗ್ರಹ" ಸಂಗ್ರಹಿಸುವ ನನ್ನ ಹವ್ಯಾಸ. ಮಣ್ಣು, ಹಿತ್ತಾಳೆ, ಪ್ಲಾಸ್ಟಿಕ್, ಪೇಪರ್ ಗಣೇಶ.. ವಾದ್ಯ ಗಣಪತಿ, ನಾಟ್ಯ ಗಣಪತಿ ಎಲ್ಲಾ ಬಂದು ನನ್ನ ಕೈಸೇರಿದವು. ಪ್ರತಿ ವರ್ಷ ಹಬ್ಬ ಬಂತೆಂದರೆ ಪೂಜಿಸುವ ಮೂರ್ತಿಯ ಕೆಳಗಡೆ ನನ್ನೆಲ್ಲಾ ಕಲೆಕ್ಷನ್ ಗಣಪಗಳನ್ನು ಜೋಡಿಸ್ತಾಯಿದ್ದೆ, ಜೊತೆಗೆ ಹಲವು ಬಗೆಯ ಗಣಪನ ರಂಗೋಲಿಯನ್ನು ಹಾಕಿ ಸಿಂಗರಿಸ್ತಾಯಿದ್ದೆ. ವರ್ಷದಿಂದ ವರ್ಷಕ್ಕೆ ನನ್ನ ಗಣಪ ವಿಗ್ರಹಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಮನೆಯ ಶೋಕೇಸ್ ನಲ್ಲಿ ಜಾಗ ಕಮ್ಮಿಯಾಗ್ತಾ ಬಂತು. ಮದುವೆಯ ನಂತರ ಅತ್ತೆಮನೆನೂ ತುಂಬೋಕೆ ಶುರು ಮಾಡಿದೆ:)

2007 - Our first try!
ಈಗ ಈ ಪರದೇಶ ಅಮೇರಿಕಾದ ತಲಹಾಸಿಯಲ್ಲಿ ಮಣ್ಣಿನ ಮೂರ್ತಿ ಸಿಗದೇ ಪರದಾಡುತ್ತಿದ್ದಾಗ ಗೆಳತಿಯೊಬ್ಬರು ತಾವೇ ಮೂರ್ತಿಯನ್ನು ಮಾಡಿಕೊಳ್ಳುತ್ತೇವೆ ಅಂತ ಹೇಳಿದ್ದು ಕೇಳಿ, ನಾವೂ ಪ್ರಯತ್ನಿಸೋಣ ಅಂತ ಹೋದ ವರುಷ ಅಂಗಡಿಯಿಂದ ತಂದ ಜೇಡಿ ಮಣ್ಣಿನಿಂದ ಗಣಪನ ಮೂರ್ತಿ ಮಾಡಿ ಹಬ್ಬ ಮಾಡಿದ್ದೆವು.

ನನಗೆ ಸ್ಫೂರ್ತಿ ಕೊಟ್ಟ ನನ್ನ ಗೆಳತಿ ಮಣ್ಣಿನ ಗಣಪನಿಗೆ ನವಧಾನ್ಯದ ಅಲಂಕಾರ ಮಾಡಿದ್ದು ಹೀಗೆ.
ಈ ವರ್ಷದ ನಮ್ಮ ಮನೆಯಲ್ಲಿ ೮ ತಿಂಗಳ ನಮ್ಮ ಪುಟ್ಟು ಗೌರಮ್ಮನ ಜೊತೆಗೂಡಿ ನಾವು ಮಾಡಿದ ವಿನಾಯಕ.
2008

ಹಬ್ಬದ ರಂಗೋಲಿ.
ಶ್ರೀ ಸಿದ್ದಿವಿನಾಯಕನ ಕೃಪೆ ಎಲ್ಲರ ಮೇಲೆ ಸದಾಯಿರಲಿ:)

ಈ ವರ್ಷ ಹಬ್ಬದ ಹೆಚ್ಚಿನ ಫೋಟೋಸ್ ನನ್ನ ಮಗಳ ಬ್ಲಾಗಿನಲ್ಲಿ ನೋಡಿ.