Tuesday, December 2, 2008
ತಲೆ ಕೆಳಗಾದ ಮುಖ!!
ಮನೆಯೊಳಗೆ ಓಡಿ ಬಂದು ಕ್ಯಾಮೆರಾ ಹಿಡಿದು ರೋಡಿಗೆ ದೌಡಾಯಿಸಿದೆ. ನೆಗಡಿ ಇದ್ದರಿಂದ ಹೇಮಂತ್ ಹೆಚ್ಚು ಹೊತ್ತು ಫೋಟೋ ತೆಗೆಯುತ್ತಾ ಹೊರಗೆ ನಿಲ್ಲಲಿಲ್ಲ. ನಾನೇ ಫೋಟೋ ತೆಗೆಯಲು ಪ್ರಯತ್ನಿಸಿದೆ, ಅಷ್ಟೇನು ಚೆನ್ನಾಗಿಲ್ಲ...
ಇದ್ದುದರಲ್ಲಿ ವಿಡೀಯೋ ಪರವಾಗಿಲ್ಲ ಅನಿಸುತ್ತೆ. ಅದನ್ನೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
Monday, December 1, 2008
ಬಾನಿನಲ್ಲೊಂದು ನಗು ಮುಖ :)
252,000 ಮೈಲಿ ದೂರವಿರುವ ಚಂದಿರ ಈ ಮೂವರಲ್ಲಿ ನಮಗೆ ತೀರಾ ಹತ್ತಿರದಲ್ಲಿರುವ ಮತ್ತು ಚಿಕ್ಕದಾದ್ದು. ಗುರು ನಮ್ಮಿಂದ 94 million ಮೈಲಿ ದೂರದಲ್ಲಿದ್ದರೆ ಶುಕ್ರ 540 million ಮೈಲಿಗಳು. ಈ ಮೂರು ಆಗಾಗ್ಗೆ ಒಂದರ ಹತ್ತಿರ ಒಂದು ಬರುತ್ತಾವಾದ್ರೂ ಬಹಳಷ್ಟು ಸಲ ಹಾಗಾದಾಗ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವುದರಿಂದ ನಮಗೆ ಈ ಮಿಲನ ಕಾಣಿಸುವುದಿಲ್ಲ. ಈ ಸುಂದರ ಮಿಲನ ಮತ್ತೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವುದು Nov. 18, 2052ರಲ್ಲಿ ಅನ್ನುತ್ತಾರೆ ಮೈಯಾಮಿ ಪ್ಲಾನೆಟೇರಿಯಂನ ನಿರ್ದೇಶಕ ಜ್ಯಾಕ್ ಹಾರ್ಕ್-ಹೀಮರ್ ಅವರು.
ಇದನ್ನು ನೋಡಲು ಬಲು ಕಾತುರದಿಂದ ಕಾಯುತ್ತಿದ್ದೆವು ಆದರೆ ಈಗಿಲ್ಲಿ ಮೋಡಕವಿದ ವಾತಾವರಣವಿದ್ದು ನಿನ್ನೆ ಏನೂ ಕಾಣಿಸಲಿಲ್ಲ. ಇಂದು ಅಂತರ್ಜಾಲದಲ್ಲಿ ಎಲ್ಲೆಡೆ ಆ ಸುಂದರ ದೃಶ್ಯದ ಚಿತ್ರಗಳು ಭಿತ್ತರಿಸಿವೆ. ಮೈಸೂರಿನಲ್ಲಿರುವ ಗೆಳೆಯರು ತಾವು ತೆಗೆದ ಈ ಅಪುರೂಪದ ಫೋಟೋಗಳನ್ನ ತಮ್ಮ ಬ್ಲಾಗಿನಲ್ಲೇರಿಸಿದ್ದಾರೆ. ಈ ಚಿತ್ರಗಳನ್ನ ನೋಡ್ತಾಯಿದ್ದ್ರೆ ಡ್ರೀಮ್-ಲ್ಯಾಂಡ್-ನಲ್ಲಿರುವ ಅನುಭವ ಆಗುತ್ತೆ. ಪ್ರಕೃತಿಯ ಸೊಬಗು ಹಣ್ಣಿಗೆ ಹಬ್ಬ ಅಲ್ವ. ಅಂತೆಯೇ ಸಿನೆಮಾಗಳಲ್ಲಿ ಹಾಡಿನ ಸನ್ನಿವೇಶಕ್ಕೆಂದು ತಾರೆಗಳ ಸೆಟ್ಟಿಂಗ್ ನೆನಪಾಯ್ತು. ಇಂದು ಸಂಜೆಗಾದರೂ ನಮಗೆ ಈ ಅಪುರೂಪದ ದೃಶ್ಯ ನೋಡೋ ಭಾಗ್ಯ ಸಿಗುತ್ತಾ ಕಾದು ನೋಡಬೇಕು.
ಆಸ್ಟ್ರೇಲಿಯಾದಲ್ಲಿ ಜನರು ಸೆರೆ ಹಿಡಿದ ಚಿತ್ರಗಳು ಇಲ್ಲಿವೆ. ಹಾಂಗ್-ಕಾಂಗ್ ನಲ್ಲಿರುವ ಗೆಳೆಯರೊಬ್ಬರು ಕಳುಹಿಸಿದ ಫೋಟೋ ಇದು.
ಈ ಫೋಟೋಗಳಂತೆಯೇ ಬಾನಿನಲ್ಲಿ ನಗು ಮುಖ ಮೂಡಿಸಿದ ಇನ್ನು ಕೆಲವು ಫೋಟೋಗಳು ಕೆಲಗಿವೆ ನೋಡಿ. ಯಾವಾಗಲೋ ಅಂತರ್ಜಾಲದಲ್ಲಿ ನೋಡಿದ್ದ ಚಿತ್ರಗಳಿವು, ನನ್ನ ಕಂಪ್ಯೂಟರ್ ನಲ್ಲಿದ್ದವು, ಇವನ್ನು ಸೆರೆಹಿಡಿದು ನಮಗಾಗಿ ಅಂತರ್ಜಾಲದಲ್ಲಿ ಹಾಕಿದವರಿಗೆ ನನ್ನ ಅಭಿನಂದನೆಗಳು.
Friday, November 14, 2008
ಮಕ್ಕಳ ದಿನಾಚರಣೆ ಶುಭಾಶಯಗಳು !!
ಮುದ್ದು ಪುಟಾಣಿಗಳೇ,
Wednesday, November 5, 2008
ಸಾವು ಕೊನೆಯಲ್ಲ ...
ಉಲ್ಲಾಸ್ ಜೊತೆ ಮಾತನಾಡುತ್ತಾ ಕೋಣೆಗೆ ಬಂದರು ಪ್ರಖ್ಯಾತ ಮಕ್ಕಳ ವೈದ್ಯ ಡಾ. ಹರ್ಷ. ಸವಿತಾಳನ್ನು ಕಂಡು ಉಲ್ಲಾಸ್ "ಡಾ. ಹರ್ಷ ನಿನ್ನೊಂದಿಗೆ ಮಾತಾಡಲು ಬಂದಿದ್ದಾರೆ ಸವಿತ, ನೋಡಿಲ್ಲಿ" ಎಂದವಳನ್ನು ಎತ್ತಿ ಕೂರಿಸಿದನು. ಡಾಕ್ಟರ್’ನ್ನು ಹತಾಶಳಾಗಿ ನೋಡುತ್ತಾ "ಏನು, ಇನ್ನೇನಿದೆ ನೀವು ಹೇಳಲಿಕ್ಕೆ?" ಅಂದಳು. "ನೋಡಿ ಸವಿತ ಅವರೆ, ನಿಮ್ಮ ದುಃಖ ನನಗೆ ಅರ್ಥವಾಗುತ್ತದೆ. ನಮ್ಮ ಪ್ರಯತ್ನ ನಾವು ಮಾಡಿದ್ವಿ, ಈಗ ನಾವು ಅವಿನಾಶ್’ನ ದೇಹವನ್ನು ತಗೊಂಡು ಹೋಗಬೇಕು". ಅವರ ಮಾತಿನ್ನೂ ಪೂರ್ತಿಗೊಳ್ಳುವ ಮುಂಚೆಯೇ "ಇಲ್ಲಾಆಆಆಆ" ಎಂದು ಅರಚುತ್ತಾ ಎದ್ದ ಸವಿತ ಮಗನ ದೇಹವನ್ನು ಬಿಗಿದಪ್ಪಿ "ನೀವ್ಯಾರೂ ನನ್ನ ಕಂದನನ್ನು ಮುಟ್ಟಬೇಡಿ, ಯಾರಿಗೂ ಅವನನ್ನು ಮುಟ್ಟಲು ನಾ ಬಿಡೊಲ್ಲ. ಅವನು ನನ್ನ ಬಿಟ್ಟು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ". "ಸಮಾಧಾನ ಮಾಡಿಕೊಳ್ಳಿ ಸವಿತ, ನಿಜ ಸ್ಥಿತಿಯನ್ನು ಅರಿಯಿರಿ. ಅವಿನಾಶ್ ಇನ್ನಿಲ್ಲ ಅನ್ನೋದು ನಿಜ ". ಡಾಕ್ಟರ್ ಮಾತು ಕೇಳಿ ಸವಿತ "ಇನ್ನೊಂದು ಸ್ವಲ್ಪ ಹೊತ್ತು ನನ್ನ ಮಗನೊಂದಿಗೆ ಇರಲು ಬಿಡಿ" ಎಂದು ಅಂಗಲಾಚಿದಳು. "ನಿಮ್ಮ ಮಾತು, ನೋವು ನನಗೆ ಅರ್ಥವಾಗುತ್ತದೆ ಸವಿತ ಅವರೆ, ಆದರೆ ಈಗ ನೀವು ಯೊಚಿಸಬೇಕಾದ್ದ ಮತ್ತೊಂದು ಮುಖ್ಯ ವಿಚಾರವಿದೆ. ನೀವು ಇಷ್ಟಪಟ್ಟಲ್ಲಿ ಅವಿನಾಶ್ ಅಂತಹ ಹಲವು ಮಕ್ಕಳಿಗೆ ನೀವು ಸಹಾಯ ಮಾಡಬಹುದು". ಅವರ ಮಾತು ಅರ್ಥವಾಗದೆ ಅವರನ್ನು ಪ್ರಶ್ನಾರ್ಥವಾಗಿ ದಿಟ್ಟಿಸುತ್ತಾ ಕುಳಿತಳು. "ನಮ್ಮಲ್ಲಿ ಅವಿನಾಶ್’ನಂತೆಯೇ ಹೃದಯ ತೊಂದರೆಯಿಂದ ಬಳಲುತ್ತಿರುವ ಹಲವು ಮಕ್ಕಳಿದ್ದಾರೆ. ಅವರಿಗೆ ಸುಸ್ಥಿತಿಯಲ್ಲಿರುವ ಅಂಗಾಗಗಳು ಬೇಕು. ಹಾಗೆಯೆ ಅಂಧ ಮಕ್ಕಳಿಗೆ ನಿಮ್ಮ ಅವಿನಾಶನ ಕಣ್ಣುಗಳು ಬೆಳಕಾಗಬಲ್ಲವು". "ಇಲ್ಲ, ನನ್ನ ಮುದ್ದು ಕಂದನಿಗೆ ನೀವ್ಯಾರು ಇನ್ನೂ ಹಿಂಸೆ ಮಾಡಬೇಡಿ. ಅವನು ಇನ್ನಾದರೂ ನೆಮ್ಮದಿಯಿಂದಯಿರಲಿ. ಅವನ ಹತ್ತಿರ ನಾನ್ಯಾರನ್ನೂ ಬಿಡೋಲ್ಲ" ಉಲ್ಲಾಸ್ ಸವಿತಾಳನ್ನು ಅಪ್ಪಿಹಿಡಿದು ಸಾಂತ್ವಾನಗೊಳಿಸಲು ಪ್ರಯತ್ನಿಸುತ್ತಾ ಅವಳನ್ನು ಕೋಣೆಯಿಂದ ಹೊರಗೆ ಕರೆದೊಯ್ದ, ಹಾಗೆಯೆ ಡಾಕ್ಟರ್’ಗೆ ಕಣ್ಣ್’ಸನ್ನೆಯಲ್ಲಿ ತನ್ನ ಸಮ್ಮತಿ ತಿಳಿಸಿದ.
ಆಫೀಸ್’ನಿಂದ ಬಂದ ಉಲ್ಲಾಸ್ ಕೈಯಲ್ಲಿ ಅವಿನಾಶನ ಫೋಟೋ ಹಿಡಿದು ಅಳುತ್ತಾ ಸೋಫಾದ ಮೇಲೆ ಮಲಗಿದ್ದ ಸವಿತಾಳನ್ನು ಕಂಡು "ಸವಿತ, ಸಾಕು ಮಾಡು ಈ ಅಳು, ಆಗಲೇ ೨ ವಾರ ಆಯಿತು. ಬಾ ಆಸ್ಪತ್ರೆಗೆ ಹೋಗಿ ಬರೋಣ" ಅನ್ನುತ್ತಾ ಅವಳನ್ನು ಎಬ್ಬಿಸಿದನು. "ಈಗೇನಿದೆ ಅಲ್ಲಿ ನಮಗೆ ಕೆಲಸ? ನಾನಲ್ಲಿಗೆ ಬರೋಲ್ಲ, ಅವರೆಲ್ಲ ನನ್ನ ಅವಿಯನ್ನು ನನ್ನಿಂದ ದೂರ ಮಾಡಿದರು. ಕೊನೆಗೆ ಅವನಿಗೆ ಚಿತ್ರಹಿಂಸೆ ಕೊಟ್ಟರು." "ನೀನಲ್ಲಿ ನೋಡಬೇಕಾದ್ದು ಇದೆ ಸವಿತ, ನನ್ನ ಮಾತು ನಂಬು, ನನಗೋಸ್ಕರ ಆದ್ರೂ ಬಾ" ಎನ್ನುತ್ತಾ ಅವಳನ್ನು ಹೊರಡಿಸಿದ.
ಆಸ್ಪತ್ರೆಯಲ್ಲಿ ಸೀದಾ ಡಾ. ಹರ್ಷರ ಕೋಣೆಗೆ ನಡೆದರು. ಇವರ ಬರುವಿಕೆಯನ್ನೆ ಎದುರು ನೋಡುತ್ತಿವರಂತೆ ಹರ್ಷ "ಬನ್ನಿ, ನಿಮಗಾಗಿಯೇ ಕಾಯುತ್ತಿದ್ದೆ. ಹೇಗಿದ್ದೀರಾ ಸವಿತ? ಬನ್ನಿ ಹೋಗೋಣ" ಅನ್ನುತ್ತಾ ಲಿಫ್ಟ್’ನಲ್ಲಿ ಮೂರನೆ ಮಹಡಿಗೆ ಕರೆದೊಯ್ದರು. ಏನಾಗುತ್ತಿದೆ ಅಂತ ತಿಳಿಯದೆ ಸವಿತ "ನಾವೆಲ್ಲಿಗೆ ಹೋಗುತ್ತಿದ್ದೇವೆ ಉಲ್ಲಾಸ್" ಎಂದು ಪ್ರಸ್ನಿಸಿದಳು, ಅಷ್ಟರಲ್ಲಿ ಅವರು ಪೋಸ್ಟ್-ಆಪರೇಟೀವ್ ವಾರ್ಡಿಗೆ ಬಂದಿದ್ದರು. ಡಾ.ಹರ್ಷರನ್ನು ನೋಡುತ್ತಿದ್ದಂತೆಯೇ ನರ್ಸ್ ಮಕ್ಕಳನ್ನು ಅವರ ಬಳಿ ಕರೆತಂದಳು. ಸವಿತಾಳಿಗೆ ಇದೇನು ಅರ್ಥವಾಗುತ್ತಿಲ್ಲ, "ಈ ಮಕ್ಕಳು ಯಾರು? ನನ್ನ ಬಳಿ ಏಕೆ ಕರೆತಂದರು, ಇದೆಲ್ಲ ಏನು" ಅಂತ ಉಲ್ಲಾಸನ ಕಡೆ ತಿರುಗಿದಾಗ "ಆ ಹುಡುಗಿಯ ಕಣ್ಣು ನೋಡು ಸವಿತ" ಅಂದನು. ಗೊಂದಲಗೊಂಡ ಸವಿತ ಉಲ್ಲಾಸ್ ತೋರಿಸಿದ ಹುಡುಗಿಯತ್ತ ಮತ್ತೊಮ್ಮೆ ನೋಡಿದಳು. ಇದು ಸಾಧ್ಯನಾ? ಅದೇ ಸುಂದರ ಕಣ್ಣುಗಳು, ತನ್ನ ಅವಿನಾಶನ ಕಣ್ಣುಗಳು. ತನಗೇ ಗೊತ್ತಿಲ್ಲದಂತೆ "ಅವಿ....." ಎಂದು ಕಿರುಚುತ್ತಾ ಆ ಹುಡುಗಿಯನ್ನು ಬಿಗಿದಪ್ಪಿ ಮುದ್ದಾಡಿದಳು. ಅಷ್ಟರಲ್ಲಿ ಉಲ್ಲಾಸ್ ಮತ್ತೊಬ್ಬ ಹುಡುಗನನ್ನು ಸವಿತಳ ಬಳಿ ಕರೆತಂದನು. ಸವಿತ ಆ ಮಗುವನ್ನು ಅಪ್ಪುತ್ತಿದ್ದಂತೆಯೇ ಹೃದಯ ಬಡಿತ ಲಬ್-ಡಬ್ ಲಬ್-ಡಬ್ ಕೇಳಿಸಲಾರಂಭಿಸಿತು ಆದರದು ಅವಳ ಕಿವಿಗೆ ಅಮ್ಮ ಅಮ್ಮ ಎಂದು ಕೇಳಿಸಿತು.
ಚಕಿತಳಾದ ಸವಿತ ಉಲ್ಲಾಸನ ಮುಖ ನೋಡಿದಳು. "ಹೌದು ಸವಿತ, ನಮ್ಮ ಅವಿಯ ಹೃದಯವದು. ನಾವು ಒಬ್ಬ ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದೆವು. ಈಗ ನೋಡು ನಮ್ಮ ಅವಿ ಇವರೆಲ್ಲರಲ್ಲಿ ಬದುಕಿದ್ದಾನೆ." ತನ್ನ ಕಣ್ಣೀರೊರೆಸಿಕೊಳ್ಳುತ್ತಾ ಸವಿತ "ಹೌದು ನನ್ನ ಅವಿ ಇಲ್ಲೇ ಇದ್ದಾನೆ, ಇನ್ನು ನಾನೇಕೆ ಅಳಲಿ?" ಎನ್ನುತ್ತಾ ಆ ಮಕ್ಕಳನ್ನು ಮತ್ತೊಮ್ಮೆ ಬಿಗಿದಪ್ಪಿದಳು. :)
Friday, October 31, 2008
ಕನ್ನಡ ಈಗ ಶಾಸ್ತ್ರೀಯ ಭಾಷೆಗಳ ಪಟ್ಟಿಗೆ !!!
Monday, October 27, 2008
ಬಣ್ಣ ಬಣ್ಣದ ದೀಪಗಳು !!!
ಪೆನ್ಸಿಲ್ ಸ್ಕೆಚ್ ಪ್ರವೀಣೆ ಉಮಾ ಅವರ ಕೈಯಲ್ಲಿ ಮೂಡಿದ ಸುಂದರ ಬಣ್ಣಬಣ್ಣದ ಪ್ಲೇ ಡೋ ದೀಪಗಳು.
Sunday, October 26, 2008
ದೀಪಾವಳಿ ಹಾಡುಗಳು !!!
ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ
ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ//ಪ//
ಶುಕ್ರವಾರದಲ್ಲಿ ನಿನ್ನ/ ಕೀರ್ತನೆಯಗೈವೆ
ಭಕ್ತಿಯಿಂದ ಬೇಡುವೆ ಮುಕ್ತಿ ಸಂಪದವ ನೀಡೆ //ದೀಪ//
ನಿನ್ನನ್ನೆ ಪಾಡುವೆ ನಿನ್ನನ್ನೆ ಪೊಗಳುವೆ
ನಿನ್ನ ಚರಣ್ದಲ್ಲಿ ಶಿರವನಿಟ್ಟು ನಾ ನಮಿಸುವೆ//೨//
ನಿನ್ನ ಕೃಪೆ ಕಟಾಕ್ಷವು ನನ್ನದಾಗಿ ಬೆಳಗುತಿರಲಿ//ದೀಪ//
ಅಜ್ಞಾನದ ಕತ್ತಲಲ್ಲಿ ಬಳಲಿ ಬೆಂಡಾಗಿಹೆನು
ಸುಜ್ಞಾನದ ಬೆಳಕು ನೀಡಿ ಜೀವನ ಹಸನಾಗಿಸು//೨//
ಅಭಯವ ನೀಡು ಬಾ/ ಕರುಣೆಯ ತೋರು ಬಾ
ಮನಸು/ ನಿನ್ನಲ್ಲಿ/ ನಿಲ್ಲಿಸು/ ತಾಯೇ //ದೀಪ//
ನಮ್ಮ ಕನ್ನಡ ಚಲನಚಿತ್ರಗಳಲ್ಲಿ ಕೆಲವು ದೀಪಾವಳಿ ಹಾಡುಗಳಿವೆ. ಅವುಗಳಲ್ಲಿ ಡಾ. ರಾಜ್ ಮತ್ತು ಹರಿಣಿ ಅಭಿನಯದ "ನಂದಾ ದೀಪ" ಚಿತ್ರದಲ್ಲಿರುವ "ನಾಡಿನಂದಾ ಈ ದೀಪಾವಳಿ ಬಂತು.. ...." ಹಾಡು ನನಗೆ ಬಹಳ ಇಷ್ಟ. ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಿದರೂ ಈ ಹಾಡು ನನಗೆ ಸಿಗಲಿಲ್ಲ. ನಿಮ್ಮಲ್ಲಿ ಇದ್ದರೆ ನನಗೆ ದಯವಿಟ್ಟು ಈ-ಮೇಲ್ ಮಾಡಿ.
೨೦೦೩ರಲ್ಲಿ ಬಿಡುಗಡೆಯಾದ ’ನಂಜುಂಡಿ’ ಚಲನಚಿತ್ರದಲ್ಲಿರುವ ಈ ಅರ್ಥಪೂರ್ಣ ಹಾಡು ನೋಡಿ . ಸಾಹಿತ್ಯ ಮತ್ತು ಸಂಗೀತ ಹಂಸಲೇಖ ಅವರಿಂದ. ಹಾಡಿರುವವರು ಮಧು ಬಾಲಕೃಷ್ಣ ಮತ್ತು ನಂದಿತ್.
ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಮನಸಿನಿಂದ ಮನಸನು
ಬೆಳಗಬೇಕು ಮಾನವ
ಮೇಲು ಕೀಳು ಭೇದ ನಿಲ್ಲಲು
ಭೇದವಿಲ್ಲ ಬೆಂಕಿಗೆ
ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ ಪ
ಆಸೆ ಹಿಂದೆ ದುಃಖವೆಂದರು
ರಾತ್ರಿ ಹಿಂದೆ ಹಗಲು ಎಂದರು
ದ್ವೇಷವೆಂದು ಹೊರೆ ಎಂದರು
ಹಬ್ಬವದಕೆ ಹೆಗಲು ಎಂದರು
ಎರಡು ಮುಖದ
ನಮ್ಮ ಜನುಮದ ವೇಷಾವಳಿತಿಳಿದು
ಹಾಲ್ಬೆಳಕ ಕುಡಿವುದೇ ದೀಪಾವಳಿ ೧
ಮಣ್ಣಿನಿಂದ ಹಣತೆಯಾದರೆ
ಬೀಜದಿಂದ ಎಣ್ಣೆಯಾಯಿತು
ಅರಳೆಯಿಂದ ಬತ್ತಿಯಾದರೆ
ಸುಡುವ ಬೆಂಕಿ ಜ್ಯೋತಿಯಾಯಿತು
ನಂದಿಸುವುದು ತುಂಬ ಸುಲಭವೋ
ಹೇ ಮಾನವ
ಆನಂದಿಸುವುದು ತುಂಬ ಕಠಿಣವೋ
ಹೇ ದಾನವ೨
ದೀಪಾವಳಿ ಹಬ್ಬದ ಶುಭಾಶಯಗಳು !!!
ಎಲ್ಲೆಲ್ಲೂ ಪಟಾಕಿಗಳ ಹಾವಳಿ !!
ಶುಭವ ತರಲಿ ಈ ದೀಪಾವಳಿ
ನಮ್ಮನಿಮ್ಮೆಲ್ಲರ ಬಾಳಿನಲಿ !!!
ದೀಪಾವಳಿ ಬೆಳಕಿನ ಹಬ್ಬ, ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಹಬ್ಬ, ಅಜ್ಞಾನದಿಂದ ಸುಜ್ಞಾನದತ್ತ ಕರೆದೊಯ್ಯುವ ಹಬ್ಬ, ಅಂಧಕಾರ ಕಳೆಯುವ, ಪ್ರೀತಿ-ವಿಶ್ವಾಸದ ಹಬ್ಬ ದೀಪಾವಳಿ.
ದೀಪಾವಳಿ ಅಂದೊಡನೆ ಮನಸಿಗೆ ಬರುವುದು ಸಾಲುಸಾಲು ದೀಪಗಳು, ಢಂ ಢಂ ಪಟಾಕಿಗಳು, ಬಣ್ಣ ಬಣ್ಣದ ರಂಗೋಲಿ, ಬಗೆಬಗೆಯ ಸಿಹಿ ತಿಂಡಿಗಳು. ಹೊಸ ಬಟ್ಟೆ ಹಾಕಿಕೊಂಡು, ಅಣ್ಣ ತಮ್ಮಂದಿರ ಜೊತೆ ಪೈಪೋಟಿಯ ಮೇಲೆ ಪಟಾಕಿ ಹಚ್ಚೋದು.. ಅದರಲ್ಲೂ ಬೆಳಗ್ಗೆ ಎಲ್ಲರಿಗಿಂತಾ ಮೊದಲು ನಾನೇ ಪಾಟಾಕಿ ಸಿಡಿಸಬೇಕೆಂದು ಬೇಗ ಎದ್ದು, ಸ್ನಾನ ಮುಗಿಸಿ, ಅಮ್ಮ "ಇಷ್ಟು ಬೇಗ ಪಟಾಕಿ ಸಿಡಿಸಿ ಗಲಾಟೆ ಮಾಡಬೇಡ" ಎಂದರೂ ಕೇಳದೇ "ಇರಲಿ ಬಿಡಮ್ಮ ಮಲಗಿರೋರಿಗೆ ಅಲರಾಮ್ ಆಗುತ್ತೆ" ಅಂತ ಹೇಳಿ ರೋಡಿಗೆ ಓಡ್ತಾಯಿದ್ದೆ :D
ಹಬ್ಬದ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.
Thursday, September 25, 2008
ನಾಮಕರಣ ವಿಧಾನದ ಹಿನ್ನಲೆ !!!
ಹೆಸರು ಬರೆಯಲು ತಂದೆಯು ತನ್ನ ಉಂಗುರವನ್ನೇ ಏಕೆ ಬಳಸುತ್ತಾನೆ?
ಚಿನ್ನಕ್ಕೆ ಲೋಪವಿಲ್ಲ, ಅದು ಶ್ರೇಷ್ಠವಾದದ್ದು. ಹೆಸರಿಡುವ ಕೆಲಸ ತಂದೆಯದ್ದಾದ್ದರಿಂದ ಅವನು ತೊಡುವ ಒಡವೆಗಳಲ್ಲಿ ಉಂಗುರ ಬಹಳ ಸುಲುಭವಾಗಿ ತೆಗೆದು ಹಾಕಬಹುದು. ಅಲ್ಲದೆ ಬೇರೆ ಆಭರಗಳಿಗೆ ಹೋಲಿಸಿದರೆ ಉಂಗುರದಲ್ಲಿ ಬರೆಯುವುದು ಸುಲಭ. ಜೊತೆಗೆ ರೋಮನ್ನರ ನಂಬೆಕೆಯಂತೆ ನಮ್ಮ ಎಡಗೈಯ ೪ನೇ ಬೆರಳಿನಿಂದ ಶುರುವಾಗುವ ರಕ್ತನಾಳವೊಂದು ನೇರ ಹೃದಯ ಸೇರುತ್ತದಂತೆ. ಮಗುವಿನ ಹೆಸರನ್ನು ಬರೆಯಲು ತಂದೆಯು ತನ್ನ ಹೃದಯಕ್ಕೆ ಹತ್ತಿರವಿರುವ ಬೆರಳಿನ ಉಂಗುರವನ್ನು ಬಳಸಿ ಮಗುವಿಗೆ "ನೀನು ನನಗೆ ಬಹಳ ಪ್ರೀತಿಪಾತ್ರನಾದವಳು/ನು" ಅಂತ ಹೇಳುವಂತಿದೆ.
ಅಕ್ಕಿಯ ಮೇಲೆ ಮಗುವಿನ ಹೆಸರು ಬರೆಯಲು ಕಾರಣವೇನು?
ಅಕ್ಕಿಯ ಮೆಲೆ ಬರೆದ ಹೆಸರು ತಟ್ಟೆ ಸ್ವಲ್ಪ ಅಲುಗಾಡಿದರೆ ಅಳಿಸುವುದು, ಹಾಗೆಯೇ ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಮಗುವಿಗೆ ತಿಳಿಸಲು.
ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುವುದು ಏಕೆ?
- ಜೇನಿನಷ್ಟೇ ಸಿಹಿಯಾದ ಹೆಸರನ್ನು ನಿನಗೆ ಇಡುತ್ತಿರುವೆವು ಕಂದ ಅಂತ ತಿಳಿಸಲು.
- ಮಗುವಿನ ಬಾಳು ಜೇನಿನಂತೆ ಸಿಹಿಯಾಗಿರಲೆಂದು ಹಾರೈಸಲು.
- ಮಗುವು ತನ್ನ ನಡೆ-ನುಡಿಗಳನ್ನು ಜೇನಿನಂತೆ ಸಿಹಿಯಾಗಿ ಬೆಳಸಿಕೊಳ್ಳಲಿಯೆಂದು.
- ಸಿಹಿಯಾದ್ದರಿಂದ ಮಗುವು ಯಾವುದೇ ರಗಳೆಯಿಲ್ಲದೆ ಜೇನು ಚೀಪುತ್ತದೆ ಎಂದು.
ನನ್ನ ಮಗಳ ನಾಮಕರಣವೂ ಹೀಗೇ ಮಾಡಿದೆವು. ಜೇನಿನಲ್ಲಿ "Clostridium Botulimun" ಎಂಬ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಅವಳಿಗೆ ಜೇನಿನ ಬದಲಿಗೆ ಹಾಲು ಚೀಪಿಸಿದೆವು:)
Thursday, September 11, 2008
ಅದೃಷ್ಟದಾಟ !!!
೧೨ ವರ್ಷದ ಮೂಕ ಬಾಲಕ ಕ್ರಿಸ್ ಅಲೆಗಳಲ್ಲಿ ಸಿಕ್ಕಿದ್ದನ್ನು ನೋಡಿ, ಅವನನ್ನು ರಕ್ಷಿಸಲು ಹೋದ ಅವನಪ್ಪ ಕೂಡ ಅಲೆಗಲಿಗೆ ಸಿಕ್ಕಿ ಬಿದ್ದ. ಮಗನನ್ನು ಎಚ್ಚರದಿಂದ ಇಡಲು ಅಪ್ಪ, ಮಗನ ಅಚ್ಚುಮೆಚ್ಚಿನ ಡಿಸ್ನಿ ಚಲನಚಿತ್ರ "Toy Story"ಯಲ್ಲಿ Buzz Lightyearನ ‘To infinity ... and beyond’ ಎಂಬ ಡಯಲಾಗನ್ನು ರಾತ್ರಿ ಬಹಳ ಹೊತ್ತು ಮಗನಿಗೆ ಕೇಳುವಂತೆ ಹೇಳುತ್ತಾಯಿದ್ದು, ಸ್ವಲ್ಪ ಸಮಯದ ನಂತರ ಮಗನ ಧ್ವನಿ ಕೇಳದೇ ತನ್ನ ಮಗ ಇನ್ನಿಲ್ಲ ಅಂತ ಅನ್ನಿಸಿ ಹತಾಶನಾದನು. ಆದರೂ ಮಗಳನ್ನು ನೆನೆದು ತಾನು ಧೈರ್ಯಗೆಡದೇ ರಾತ್ರಿಯಿಡೀ ಎಚ್ಚರವಿದ್ದನು. ಹೆಚ್ಚಿನ ವಿವರಗಳು ಇಲ್ಲಿದೆ. ಅದರ ವಿಡಿಯೋ ನೋಡಿರಿ. ರಾತ್ರಿಯಿಡೀ ಸಮುದ್ರದಲ್ಲಿ ತೇಲುತ್ತಿದ್ದ ಹನ್ನೆರಡರ ಹರೆಯದ ಆ ಮೂಕ ಬಾಲಕನ ಧೈರ್ಯ, ಸ್ಥೈರ್ಯ ಮೆಚ್ಚಬೇಕಾದ್ದೇ. ಅವನಿಗೆ ನನ್ನ ಹಾಟ್ಸ್ ಆಫ್ !!!
ಈ ವಿಸ್ಮಯ ಓದುತ್ತಿದ್ದಂತೆಯೇ, ನಮ್ಮ ಗೆಳೆಯನಿಗೂ ಇದೇ ತರಹ ಅದೃಷ್ಟವಿರಬಾರದಿತ್ತೇ, ಆ ದಿನವೂ ಇಂತಹದೊಂದು ಚಮತ್ಕಾರ ನೆಡೆಯಬಾರದಿತ್ತೆ ಅನ್ನಿಸಿತು. ಬೇಡ ಬೇಡವೆಂದರೂ ಮನಸ್ಸು ಕಳೆದ ವರ್ಷಕ್ಕೆ ಓಡಿತು. ಇದೇ ಸೆಪ್ಟೆಂಬರ್ ತಿಂಗಳ ೨೩ನೇ ತಾರೀಖು ನಾವು ಮೂವರು ಸ್ನೇಹಿತರು ತಮ್ಮ ಮನೆಯವರೊಂದಿಗೆ ಫ್ಲೋರಿಡಾದ ಸೆಂಟ್ ಜಾರ್ಜ್ ದ್ವೀಪಕ್ಕೆ ವಿಹಾರಕ್ಕೆಂದು ಹೋಗಿದ್ದೆವು. ಸ್ನೇಹಿತ ಅನ್ಜುಂ ಈಜಲು ಸಾಗರಕ್ಕೆ ಹೊರಟರು. ಮಿಕ್ಕವರೆಲ್ಲ ಬರೀ ಈಜುಕೊಳದಲ್ಲಿ ಈಜುವವರೆ, ಹಾಗಾಗಿ ಎಲ್ಲರೂ ದಡದಲ್ಲೇ ಮಕ್ಕಳೊಂದಿಗೆ ಉಳಿದೆವು. ಆದರೆ ಕೆಲ ನಿಮಿಷಗಳಲ್ಲೇ ಅನ್ಜುಂ ಅವರು ಅಲೆಗಳ ರಭಸಕ್ಕೆ ಸಿಕ್ಕಿ ಈಜಲು ಯತ್ನಿಸುತ್ತಿದ್ದದ್ದು ಗಮನಿಸಿದೆವು. "ಸಹಾಯ ಮಾಡಿ" ಎಂದು ಬೊಬ್ಬೆಇಟ್ಟೆವು ಆದರೆ ಹತ್ತಿರದಲ್ಲಿದ್ದ ಯಾರಿಗೂ ಈಜು ಬರುತ್ತಿರಲಿಲ್ಲ. ಬೀಚ್-ನ ಗಾರ್ಡ್-ಗಳು ಬರುವಷ್ಟರಲ್ಲಿ ನಮ್ಮ ಸ್ನೇಹಿತ ಈಜುವುದನ್ನು ನಿಲ್ಲಿಸಿ ತೇಲುತ್ತಿದ್ದರು. ಅವರನ್ನು ದಡಕ್ಕೆ ಎಳೆದು ತಂದಾಗಲೇ ಜೀವವಿಲ್ಲವೆಂದು ನನಗೆ ಗೊತ್ತಾಗಿ ಹೋಯಿತು, ಕಣ್ಣ್ ಸನ್ನೆಯಲ್ಲೇ ನನ್ನವರಿಗೆ ವಿಚಾರ ತಿಳಿಸಿ ೭ ತಿಂಗಳ ಗರ್ಭಿಣಿಯಾಗಿದ್ದ ನಾನು ಆಗ ಆದ ಶಾಕ್-ನಿಂದ ಸುಧಾರಿಸಿಕೊಳ್ಳಲು ಹಿಂದೆ ಸರಿದು ಮಕ್ಕಳ ಜೊತೆ ಕುಳಿತೆ. ವೈದ್ಯ ವೃತ್ತಿಯಲ್ಲಿ ಎಷ್ಟೋ ಸಾವುಗಳನ್ನು ಕಂಡಿದ್ದೂ, ಹಲವಾರು ಮೃತರ ಮನೆಯವರಿಗೆ ವಿಷಯ ನಾನೆ ತಿಳಿಸಿದ್ದರೂ, ಪ್ಯಾರಾಮೆಡಿಕ್ ನವರು Resuscitation ಕೊನೆ ಪ್ರಯತ್ನ ಮಾಡುತ್ತಿರುವಾಗ ಸ್ನೇಹಿತನ ಪತ್ನಿ ನನ್ನ ಬಳಿ ಬಂದು "ಏನ್ ಆಗುತ್ತೆ?ನನ್ನ ಅನ್ಜುಂ ನನಗೆ ಸಿಗುತ್ತಾರಲ್ಲವಾ?" ಅಂತೆಲ್ಲಾ ಕೇಳಿದಾಗ ಧೈರ್ಯಗೆಡಬೇಡಿ ಅಂತ ಹೇಳಲಷ್ಟೆ ನನ್ನಿಂದ ಸಾಧ್ಯವಾಗಿದ್ದು. ನಮ್ಮೆಲ್ಲರ ಕಣ್ಣೆದುರಿನಲ್ಲೇ ಗೆಳೆಯ ಇನ್ನಿಲ್ಲವಾದರು. ಸ್ನೇಹಿತನ ಪತ್ನಿ ಮತ್ತು ೫ ವರ್ಷದ ಅವರ ಮಗಳನ್ನು ಸಾಂತ್ವಾನ ಮಾಡುತ್ತಾ ಮನೆಗೆ ಬಂದೆವು.
ಆಹ್, ನನ್ನಿಂದ ಏನೂ ಮಾಡಲಾಗಲಿಲ್ಲವಲ್ಲ ಅನ್ನೊ ನೋವು ಇಂದಿಗೂ ನನ್ನನ್ನು ಕಾಡುತ್ತದೆ.
Tuesday, September 9, 2008
ಅಲ್ಲಿ ನೋಡು ಗಣಪ ಇಲ್ಲಿ ನೋಡು ಗಣಪ
ಮೇಲೆ ನೋಡು ಗಣಪ
ಕೆಳಗೆ ನೋಡು ಗಣಪ
ಈ ಹಾಡು ನಾವು ಗಣೇಶನ ವಿಸರ್ಜನೆಗೆ ಹೋಗೋವಾಗ ಹಾಡ್ತಾಯಿದ್ವಿ. ಅಮೇರಿಕಾದಲ್ಲಿರುವ ನನ್ನ ಹಲವಾರು ಸ್ನೇಹಿತೆಯರು ಹಬ್ಬಕ್ಕೆ ತಾವೇ ಮಣ್ಣಿನಿಂದ, ಗೋಧಿಹಿಟ್ಟಿನಿಂದ, ಅರಿಶಿನದ ಗಣಪತಿಯನ್ನ ಮಾಡಿ ಪೂಜಿಸಿದ್ದರು, ಅವರು ಫೋಟೋಗಳನ್ನ ನನ್ನೊಂದಿಗೆ ಹಂಚಿಕೊಂಡರು. ಬನ್ನಿ ಅವರೆಲ್ಲರ ಮನೆ ಗಣೇಶ ದರ್ಶನ ಮಾಡಿ ಬರೋಣ.
ನಮ್ಮ ತಾಯಿ ಬೆಂಗಳೂರಿನಲ್ಲಿ ಹಬ್ಬದ ದಿನ ನನ್ನ ಗಣಪನ ಕಲೆಕ್ಶನ್ ನಲ್ಲಿ ಕೆಲವನ್ನು ಹೊರ ತೆಗೆದು ಜೋಡಿಸಿದ್ದರು.
ಮಹೇಶ್ವರ ಪುತ್ರ
ಹೂವಿನ ರಂಗವಲ್ಲಿಯಲ್ಲಿ ಗಣಪ
ಸಿದ್ದಿವಿನಾಯಕನ ರಂಗೋಲಿ
ಮೂಶಿಕವಾಹನ
ಮೊವಂಜ, ತಾಂಜನಿಯ,ಪೂರ್ವ ಆಫ್ರಿಕದಲ್ಲಿರುವ ಅಹರ್ನಿಶಿ ಶ್ರೀಧರ್ ಅವರು ನೂರಿಪ್ಪತ್ತಕ್ಕೂ ಹೆಚ್ಚು ಜನ ಸ್ನೇಹಿತರೊಡನೆ ಹಬ್ಬ ಆಚರಿಸಿದ್ದು ಹೀಗೆ.
ಆರ್ಕುಟ್ ನಲ್ಲಿರುವ Mrs South Indies ಎಂಬ ಬಳಗದ ಸದಸ್ಯೆಯರು ಹಬ್ಬ ಆಚರಿಸಿದ್ದು ಹೀಗೆ.
ಅಪ್ಪಟ ಹುಟ್ಟು ಮೈಸೂರು ಕನ್ನಡಿಗ ಎಂದು ಹೇಳಿಕೊಳ್ಳುವ ಶಂಕರ ಪ್ರಸಾದ ಅವರು ತಮ್ಮ ಸೋಮಾರಿ ಕಟ್ಟೇಲಿ ಗಣಪನ ಕೂರ್ಸಿದ್ದು ಹೀಗೆ:)
ಐರ್ ಲ್ಯಾಂಡಿನಲ್ಲಿರೋ ಕನ್ನಡಿಗರು ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಿದರು. ಹಬ್ಬದ ಫೋಟೋಗಳು ಇಲ್ಲಿವೆ.
Ganesha Outsourced! ಶಿಕಾಗೋದಲ್ಲಿನ ನಮ್ಮ ಸಾಫ್ಟ್ ವೇರ್ ಇಂಜಿನೀಯರ್ ಸಾಹೇಬ್ರು ಚೀನಾದವರು ಮಾಡಿದ ಗಣಪನ ತಂದು ಪೂಜೆ ಮಾಡಿದ್ರು.
ಶುಭಾ ಅವರು ಚಿಕ್ಕಂದಿನ ದಿನಗಳ ಹಬ್ಬ ನೆನೆಯುತ್ತಾ ಬರೆದದ್ದು Gowri Ganesha..... and memories of 'GANPATI KOODSIDDIRA?
ಶ್ರೀ ಅವರು ತಮ್ಮ ಬ್ಲಾಗಿನಲ್ಲಿ ಗಣೇಶಹಬ್ಬದ ಆಚರಣೆಯ ಬಗ್ಗೆ ಪೂರ್ತಿ ವಿವರ ಕೊಟ್ಟಿದ್ದಾರೆ.
ಗಣೇಶ ಹಬ್ಬದ ಬಗ್ಗೆ ದಟ್ಸ್ ಕನ್ನಡದಲ್ಲಿ ಹಲವಾರು ಲೇಖನಗಳು ಮೂಡಿ ಬಂದಿವೆ. ಓದಿರಿ
Wednesday, September 3, 2008
ಗಣೇಶ ಹಬ್ಬದ ಶುಭಾಶಯಗಳು!!!
2007 - Our first try! |
2008 |